ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ ಕಾರಣಕ್ಕೆ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿಸಿನ್ ಅವರಿಗೆ ವಿಧಿಸಲಾಗಿದ್ದ ಅಮಾನತು ಶಿಕ್ಷೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿಯು ಗುರುವಾರ ತಡೆ ನೀಡಿದೆ.
ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 1996ರ ಕರ್ನಾಟಕ ಬ್ಯಾಚ್ನ ಐಎಎಸ್ ಅಧಿಕಾರಿ ಮೊಹಮದ್ ಮೊಹಿಸಿನ್ ಅವರು, ಫೆ.16ರಂದು ನಿಗದಿತ ಸಮಯಕ್ಕಿಂತಲೂ 15 ನಿಮಿಷ ತಡವಾಗಿ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ಅನ್ನು ತಪಾಸಣೆ ಮಾಡಿದ್ದರು.
ಇದೇ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೊಹಮ್ಮದ್ ಮೌಸಿನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು.‘ವಿಶೇಷ ರಕ್ಷಣಾ ಪಡೆಯ (ಎಸ್ಪಿಜಿ) ಭದ್ರತೆಯಲ್ಲಿ ಇರುವವರನ್ನು ಚುನಾವಣಾ ಸಂಚಾರಿ ತನಿಖಾ ದಳದ ಸಿಬ್ಬಂದಿ ಪರಿಶೀಲಿಸುವಂತಿಲ್ಲ. ಇದನ್ನು ಮೊಹಿಸಿನ್ ಉಲ್ಲಂಘಿಸಿದ್ದಾರೆ. ಎಸ್ಪಿಜಿ ಭದ್ರತೆ ಇರುವ ಪ್ರಧಾನಿಯವರ ಹೆಲಿಕಾಪ್ಟರ್ ಅನ್ನು ಮೊಹಿಸಿನ್ ಪರಿಶೀಲಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಚುನಾವಣಾ ಆಯೋಗ ತಿಳಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಕೇಂದ್ರ ಆಡಳಿತ ನ್ಯಾಯಮಂಡಳಿಯು ಮೊಹಮ್ಮದ್ ಮೊಹಿಸಿನ್ ಅವರ ವಿರುದ್ಧದ ಅಮಾನತು ಆದೇಶಕ್ಕೆ ತಡೆ ನೀಡಿದೆ. ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿ ಎನ್ಡಿಟಿವಿ ವರದಿ ಮಾಡಿದೆ.
ಮೊಹಿಸಿನ್ ಅವರ ಪ್ರಕರಣದ ಮುಂದಿನ ವಿಚಾರಣೆಯನ್ನು ಆಡಳಿತ ನ್ಯಾಯಮಂಡಳಿಯು ಜೂನ್ ಮೂರಕ್ಕೆ ನಿಗದಿ ಮಾಡಿದೆ.