ದೆಹಲಿ: ಅಯೋಧ್ಯೆ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಿದ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಅವರು, ‘ಶಾಂತಿ, ಒಗ್ಗಟ್ಟು ಮತ್ತು ಸದ್ಭಾವನೆಯ ಮೌಲ್ಯಗಳು ಈ ರಾಷ್ಟ್ರದಲ್ಲಿ ಪ್ರಾಮುಖ್ಯತೆ ಪಡೆದಿವೆ. ಸುಪ್ರೀಂ ಕೋರ್ಟ್ನಿಂದ ಅಯೋಧ್ಯೆ ತೀರ್ಪು ಹೊರಬಂದ ಸಂದರ್ಭದಲ್ಲಿ, ದೇಶವು ಪೂರ್ಣ ಹೃದಯದಿಂದ ಆ ತೀರ್ಪನ್ನು ಅಪ್ಪಿಕೊಂಡಿತು,’ ಎಂದಿದ್ದಾರೆ.
‘ಒಂದು ಕಡೆ, ನ್ಯಾಯಕ್ಕಾಗಿ ನಡೆದ ಸುದೀರ್ಘ ಹೋರಾಟ ಅಂತ್ಯಗೊಂಡಿತು. ಇನ್ನೊಂದು ಕಡೆ, ದೇಶವು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿದಂತಾಯಿತು. ಈ ತೀರ್ಪು ಭಾರತೀಯ ನ್ಯಾಯಂಗ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲನ್ನು ನಿರ್ಮಿಸಿದೆ. ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ದೇಶವು ಹೊಸ ಭರವಸೆಗಳೊಂದಿಗೆ ಮುನ್ನಡೆಯಲಿದೆ,’ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ದೇಶದ ಭಾಷಾ ವೈವಿದ್ಯತೆಯ ಬಗ್ಗೆ ಮಾತನಾಡಿದ ಅವರು ಉತ್ತರಾಖಂಡನ ಧರ್ಚುಲಾದ ಸಣ್ಣ ಬುಡಕಟ್ಟು ಜನಾಂಗವೊಂದು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದುವರೆದ ಅವರು, ‘ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ಭಾಷೆಗಳು ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುತ್ತವೆ,’ ಎಂದು ತಿಳಿಸಿದ್ದಾರೆ.
ಇದೇ ವೇಳೆ ‘ಪರೀಕ್ಷಾ ಪೇ ಚರ್ಚಾ‘ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಜನವರಿಯಲ್ಲಿ ‘ಪರೀಕ್ಷಾ ಪೇ ಚರ್ಚಾ‘ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.