ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಇಲ್ಲದ ಸಿಬ್ಬಂದಿಯಿಂದ ‘ಅವನಿ’ಯ ಹತ್ಯೆ: ಎನ್‌ಟಿಸಿಎ ವರದಿ

Last Updated 7 ಡಿಸೆಂಬರ್ 2018, 14:16 IST
ಅಕ್ಷರ ಗಾತ್ರ

ಮುಂಬೈ (ಮಹಾರಾಷ್ಟ್ರ):‘ನರಭಕ್ಷಕ’ ಎನ್ನುವ ಹಣೆಪಟ್ಟಿ ಕಟ್ಟಿದ್ದ ಹೆಣ್ಣು ಹುಲಿ ಅವನಿ ವಿರುದ್ಧ ಪ್ರತಿಕಾರ ತೀರಿಸಿಕೊಂಡದ್ದು ತಪ್ಪು ಮತ್ತು ಅನುಭವವೇ ಇಲ್ಲದಶಾರ್ಪ್‌ಶೂಟರ್‌ ಮೂಲಕ ಗುಂಡಿಕ್ಕಿ ಕೊಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ತನ್ನ ವರದಿಯಲ್ಲಿ ದಾಖಲಿಸಿದೆ.

‘ಅವನಿ’ ಹುಲಿಗೆ ಅತ್ಯಂತ ತರಾತುರಿಯಲ್ಲಿ ಗುಂಡು ಹಾರಿಸಲಾಗಿದೆ. ಆ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ.

ಅವನಿ ಹುಲಿ ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ತಜ್ಞರ ತಂಡವು ನೀಡಿರುವ ವರದಿಯಲ್ಲಿ ಈ ಮಾಹಿತಿ ಇದೆ.

‘ಹುಲಿಯ ದೇಹ ಬಿದ್ದಿದ್ದ ಜಾಗ, ಅರಿವಳಿಕೆ ಚುಚ್ಚುಮದ್ದು ನಾಟಿಕೊಂಡಿದ್ದ ಭಾಗ ಮತ್ತು ಕೊನೆಯ ಕ್ಷಣಗಳಲ್ಲಿ ಹುಲಿಯ ಚಲನೆಯ ದಿಕ್ಕಿನ ವಿವರಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ಮರುಸೃಷ್ಟಿಸಲಾಯಿತು’ ಎಂದು ವರದಿ ಹೇಳಿದೆ.

‘ಗುಂಡಿಗೆ ಸಿಲುಕುವ ಮುನ್ನ ಹುಲಿಯು ರಸ್ತೆ ಮತ್ತು ವಾಹನಗಳಿಂದ ದೂರ ಸರಿಯುತ್ತಿತ್ತು. ಹುಲಿ ಚಲಿಸುತ್ತಿದ್ದ ದಿಕ್ಕಿನಲ್ಲೇ ಚುಚ್ಚುಮದ್ದು ಹಾರಿಸಲಾಗಿದೆ. ಇದು ಹುಲಿಯು ಹೊಂಚುಹಾಕಿರಲಿಲ್ಲ ಮತ್ತು ದಾಳಿಗೆ ಮುಂದಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಆ ಸಂದರ್ಭದಲ್ಲಿ ಹುಲಿ ಅತ್ಯಂತ ಸಹಜವಾಗಿ ವರ್ತಿಸಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಅನನುಭವಿ ಅಸ್ಗರ್ ಅಲಿ ಖಾನ್ ಗುಂಡು ಹಾರಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಅರಿವಳಿಕೆ ಚುಚ್ಚುಮದ್ದು ತಗುಲಿದ 3–5 ಕ್ಷಣಗಳಲ್ಲೇ ಗುಂಡು ಹುಲಿಯ ದೇಹವನ್ನು ಹೊಕ್ಕಿದೆ. ಚುಚ್ಚುಮದ್ದು ಹುಲಿಯ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನವೂ ಇಲ್ಲದೆ ಗುಂಡು ಹಾರಿಸಲಾಗಿದೆ. ಇದು ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಯ ಉಲ್ಲಂಘನೆ’ ಎಂದು ಹೇಳಲಾಗಿದೆ.

‘ಅಸ್ಗರ್ ಅಲಿ ಖಾನ್ ಅವರು ಬಳಸಿದ್ದ ಬಂದೂಕಿನ ಪರವಾನಗಿ ಇರುವುದು ಅವರ ತಂದೆ ಶಫತ್ ಅಲಿ ಖಾನ್ ಅವರ ಹೆಸರಿನಲ್ಲಿ. ಕಾರ್ಯಾಚರಣೆ ತಂಡದಲ್ಲಿ ಶಫತ್ ಅವರು ಇರಲಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಬಂದೂಕನ್ನು ಬಳಸಲು ಅವರು ಅಸ್ಗರ್ ಅವರಿಗೆ ಅನುಮತಿ ಪತ್ರವನ್ನೂ ನೀಡಿರಲಿಲ್ಲ. ಈ ಪ್ರಕಾರ ಅಸ್ಗರ್ ಅವರು ಅನಧಿಕೃತ ಬಂದೂಕು ಬಳಸಿ ಹುಲಿಗೆ ಗುಂಡು ಹಾರಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸಪಟ್ಟಿದೆ. ಆದರೆ ತರಬೇತಿ ಇಲ್ಲದ ಸಿಬ್ಬಂದಿಯನ್ನು ಬಳಸಿಕೊಂಡು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕಾರ್ಯಾಚರಣೆ ನಡೆಸಿದ್ದರಿಂದಲೇ ಹುಲಿಯನ್ನು ಹಿಡಿಯಲು ಒಂದು ವರ್ಷ ಒದ್ದಾಡಬೇಕಾಯಿತು. ಕೊನೆಗೆ ಹುಲಿಯನ್ನು ಕೊಂದು ಕಾರ್ಯಾಚರಣೆಯನ್ನು ಮುಗಿಸಲಾಗಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅವನಿ ಹತ್ಯೆಯ ಕುರಿತು ತನಿಖೆ ನಡೆಸುಲು ಮಹಾರಾಷ್ಟ್ರ ಅರಣ್ಯ ಇಲಾಖೆ ನವೆಂಬರ್‌ 9ರಂದು ತನಿಖಾ ಸಮಿತಿಯನ್ನು ರೂಪಿಸಿತ್ತು. ಈ ತಂಡದ ನೇತೃತ್ವವನ್ನು ಅರಣ್ಯ ಇಲಾಖೆಯ ಅಧಿಕಾರಿ ಎಸ್‌.ಎಚ್‌. ಪಾಟೀಲ್ ವಹಿಸಿದ್ದರು. ಭಾರತೀಯ ವನ್ಯಜೀವಿ ಸಂಸ್ಥೆಯ ಸದಸ್ಯ ಬಿಲಾಲ್ ಹಬೀಬ್‌, ವನ್ಯಜೀವಿ ಪ್ರಚಾರ ಟ್ರಸ್ಟ್‌ನ ಸದಸ್ಯ ಅನೀಶ್‌ ಅಂದೇರಿಯಾ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ನಿತಿನ್‌ ಕಾಕೋಡ್ಕರ್‌ ತಂಡದಲ್ಲಿದ್ದರು.

ಪಂಧಾರಕವ್ಡಾ ಅರಣ್ಯ ಪ್ರದೇಶದ ಸುತ್ತಮುತ್ತಲ ನಿವಾಸಿಗಳಿಗೆ ಈ ಹುಲಿ ಎರಡು ವರ್ಷಗಳಿಂದ ಪ್ರಾಣಭೀತಿ ತರಿಸಿತ್ತು ಹಾಗೂ ಸುಮಾರು 13 ಜನರನ್ನು ಕೊಂದಿತ್ತು ಎನ್ನುವ ಆರೋಪ ಅವನಿ ಮೇಲಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ ಕಳೆದ ಸೆಪ್ಟಂಬರ್‌ನಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಿತ್ತು. ಇದನ್ನು ಜಾರಿಗೆ ತರುವಲ್ಲಿ ಅತಿ ಉತ್ಸಾಹ ತೋರಿಸಿದ ಅಲ್ಲಿಯ ಅರಣ್ಯ ಸಚಿವ ಸುಧೀರ್‌ ಮಂಗತಿವಾರ್‌, ಹತ್ಯೆ ಮಾಡಲು ಹೈದರಾಬಾದ್‌ ಮೂಲದ ಶಾರ್ಪ್‌ಶೂಟರ್‌ಗೆ ಅನುಮತಿ ನೀಡಿದ್ದರು.

ಆರಂಭದಲ್ಲಿ ಹುಲಿ ಪತ್ತೆಗೆ ನಾಯಿಗಳು, ಡ್ರೋನ್‌, ಟ್ರ್ಯಾಪ್‌ ಕ್ಯಾಮೆರಾ ಮತ್ತು ಶಾರ್ಪ್‌ಶೂಟರ್‌ಗಳನ್ನು ಬಳಸಲಾಗಿತ್ತು. ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಲಾಗಿತ್ತು. ಅವನಿಯನ್ನು ಕೊಂದಿದಕ್ಕಾಗಿ ಪ್ರಾಣಿಪ್ರಿಯರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆಗ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುನಗಂಟಿವಾರ್ ಅವರು ಎನ್‌ಟಿಸಿಎ ನಿಯಮಾವಳಿಗಳು ಹಾಗೂ ನ್ಯಾಯಾಲಯದ ಆದೇಶವನ್ನೇ ಪಾಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಸಂಸತ್ತಿನ ಅಂಗೀಕಾರದಿಂದ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಲ್ಲಾ ರೀತಿಯ ವನ್ಯಜೀವಿಗಳ ಹತ್ಯೆ ಶಿಕ್ಷಾರ್ಹ. ಭಾರತದಲ್ಲಿರುವ ಬಂಗಾಳದ ಹುಲಿಗಳ ಸಂಖ್ಯೆ 2226 ಮಾತ್ರ. ವಿಶ್ವದಲ್ಲಿ ಈ ಸಂಖ್ಯೆ 3890. ಭಾರತದಲ್ಲಿ ವರ್ಷಕ್ಕೆ ಸರಾಸರಿ 60 ಹುಲಿಗಳು ಸಾಯುತ್ತಿವೆ ಎನ್ನುವ ಮಾಹಿತಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT