ಪಾಲ್ಗರ್, ಮಹಾರಾಷ್ಟ್ರ: ಬುಡಕಟ್ಟು ಸಮುದಾಯ ಮಕ್ಕಳ ಶಾಲೆಯಲ್ಲಿಕಲಿಯುತ್ತಿದ್ದ 14 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಅಪೌಷ್ಟಿಕತೆಯಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಸ್ವಯಂಸೇವಾ ಸಂಸ್ಥೆಯೊಂದು ಆರೋಪಿಸಿಸಿದೆ.
ಮುಂಬೈಗೆ ಹತ್ತಿರವಿರುವ ವಾಡಾ ತಾಲ್ಲೂಕಿನಲ್ಲಿರುವ ಬುಡಕಟ್ಟು ಸಮುದಾಯದ ಆಶ್ರಮ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಗೆ ಶನಿವಾರ ಜ್ವರ ಕಾಣಿಸಿಕೊಂಡಿತು. ಆರಂಭಿಕ ಹಂತದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
‘ರಕ್ತಹೀನತೆ, ಸ್ನಾಯುಸೆಳೆತ ಕಂಡುಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಠಾಣೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು’ ಎಂದುಪಾಲ್ಗರ್ನ ಸರ್ಕಾರಿ ವೈದ್ಯ ಕಾಂಚನ್ ವಾನೆರೆ ತಿಳಿಸಿದರು.
ಅಪೌಷ್ಟಿಕತೆಯೇ ಕಾರಣ: ಅಪೌಷ್ಟಿಕತೆಯಿಂದಲೇ ಬಾಲಕಿ ಸಾವನ್ನಪ್ಪಳು ಕಾರಣ ಎಂದು ಬುಡಕಟ್ಟು ಸಮುದಾಯದ ಏಳಿಗೆಗಾಗಿ ಶ್ರಮಿಸುವ ‘ಶ್ರಮಜೀವಿ ಸಂಘಟನೆ’ ತಿಳಿಸಿದೆ.
‘ಬಾಲಕಿಗೆ ಹಿಮೊಗ್ಲೋಬಿನ್ ಪ್ರಮಾಣವೂ ಏಕಾಏಕಿ ಕಡಿಮೆಯಾಗಿದೆ. ಅಪೌಷ್ಟಿಕತೆಯಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ’ ಎಂದು ಸಂಘಟನೆ ಮುಖ್ಯಸ್ಥ ವಿವೇಕ್ ಪಂಡಿತ್ ತಿಳಿಸಿದ್ದಾರೆ.
ಮೂರು ದಿನಗಳಿಂದ ಬಾಲಕಿಗೆ ಜ್ವರ ಕಾಣಿಸಿಕೊಂಡಿತು. ಆದರೂ ಶಾಲಾ ಆಡಳಿತ ಮಂಡಳಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿರಲಿಲ್ಲ,ಬುಡಕಟ್ಟು ಸಮುದಾಯದ ಮಕ್ಕಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಈ ಪ್ರಕರಣದಲ್ಲಿ ಕಂಡುಬಂದಿದೆ ಎಂದು ಅವರು ದೂರಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ವಾನೆರೆ, ವೈದ್ಯಕೀಯ ವರದಿ ಬಂದ ಬಳಿಕ ಸಾವಿನ ನೈಜ ಕಾರಣ ತಿಳಿದುಬರಲಿದೆ ಎಂದರು.