ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಚುನಾವಣೆ ಹೊಸ್ತಿಲಲ್ಲೇ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮತ್ತೆ ಹೊಡೆತ

Last Updated 4 ಜೂನ್ 2020, 10:47 IST
ಅಕ್ಷರ ಗಾತ್ರ

ಅಹಮದಾಬಾದ್‌: ಇದೇ 19ರಂದು ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಹೀಗಿರುವಾಗಲೇ ವಿರೋಧ ಪಕ್ಷ ಕಾಂಗ್ರೆಸ್‌ಗೆ ಹೊಡೆತ ಬಿದ್ದಿದೆ.

ಚುನಾವಣೆ ಎದುರಾಗಿರುವಾಗಲೇ ಕಾಂಗ್ರೆಸ್‌ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.
ಕಾಂಗ್ರೆಸ್‌ ಶಾಸಕರಾದ ಅಕ್ಷಯ್‌ ಪಟೇಲ್‌ ಮತ್ತು ಜಿತು ಚೌಧರಿ ಎಂಬುವವರು ರಾಜೀನಾಮೆ ಸಲ್ಲಿಸಿರುವುದಾಗಿ ಗುಜರಾತ್‌ ವಿಧಾನಸಭೆ ಸ್ಪೀಕರ್‌ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.

ಅಕ್ಷಯ್‌ ಪಟೇಲ್‌ ವಡೋದರಾದ ಕರ್ಜನ್‌ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರೆ, ಚೌದರಿ ವಾಲ್ಸದ್‌ನ ಕಪ್ರದಾದಿಂದ ಆಯ್ಕೆಯಾಗಿದ್ದಾರೆ.

ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡುತ್ತಲೇ ಆಡಳಿತರೂಢ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್‌, ‘ ರಾಜ್ಯಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳ ಗೆಲುವನ್ನು ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ,’ ಎಂದಿದೆ. ಈ ಆರೋಪ ಅಲ್ಲಗಳೆದಿರುವ ಬಿಜೆಪಿ, ‘ಶಾಸಕರು ಅಸಮಾಧಾನದಿಂದ ಕಾಂಗ್ರೆಸ್‌ ತೊರೆದಿದ್ದಾರೆ,’ ಎಂದು ಹೇಳಿದೆ.

ಈ ಇಬ್ಬರು ಶಾಸಕರ ರಾಜೀನಾಮೆಯೊಂದಿಗೆ ಮಾರ್ಚ್‌ನಿಂದ ಇಲ್ಲಿಯ ವರೆಗೆ ಗುಜರಾತ್‌ನಲ್ಲಿ 7 ಮಂದಿ ರಾಜೀನಾಮೆ ನೀಡಿದಂತಾಗಿದೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ 103 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ 66 ಶಾಸಕರನ್ನು ಹೊಂದಿದೆ. ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿ ಮೂರು, ಕಾಂಗ್ರೆಸ್‌ ಒಂದು ಸ್ಥಾನವನ್ನು ಹೊಂದಿತ್ತು. ಈ ಬಾರಿ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದನ್ನು ತಡೆಯಲು ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಹಾಕಿದೆ.

2017ರ ಆಗಸ್ಟ್‌ನಲ್ಲಿ ಗುಜರಾತ್‌ ಕಾಂಗ್ರೆಸ್‌, ಬಿಜೆಪಿಯ ಸಂಭಾವ್ಯ ಆಪರೇಷನ್‌ನಿಂದ ಪಾರಾಗಲು ತನ್ನ ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿ, ಆತಿಥ್ಯ ನೀಡುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಸೂಚನೆ ನೀಡಿತ್ತು. ಅದರಂತೆ ಡಿಕೆಶಿ ಅವರೂ ಗುಜರಾತ್‌ನ ಶಾಸಕರಿಗೆ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಆತಿಥ್ಯ ನೀಡಿದ್ದರು. ಅದೇ ಬೆನ್ನಲ್ಲೇ ಡಿಕೆಶಿ ವಿರುದ್ಧ ಐಟಿ ದಾಳಿಯೂ ನಡೆದಿತ್ತು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT