ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೂ, ಸಿದ್ಧಾರ್ಥರಿಗೂ ಪರೋಕ್ಷ ಸಂಬಂಧವಿದೆ: ವಿಜಯ್‌ ಮಲ್ಯ ಟ್ವೀಟ್‌

Last Updated 31 ಜುಲೈ 2019, 6:21 IST
ಅಕ್ಷರ ಗಾತ್ರ

ಬೆಂಗಳೂರು:ಕೆಫೆ ಕಾಫಿ ಡೇ ಹರಿಕಾರ ವಿ.ಜಿ.ಸಿದ್ಧಾರ್ಥ ಅವರ ವಿಷಯ ತಿಳಿಯುತ್ತಿದ್ದಂತೆ, ಅವರ ಆರ್ಥಿಕ ಬಿಕ್ಕಟ್ಟಿನಸ್ಥಿತಿಯನ್ನು ಉಲ್ಲೇಖಿಸಿಟ್ವೀಟ್‌ ಮಾಡಿರುವ ಮದ್ಯದ ದೊರೆ ವಿಜಯ್‌ ಮಲ್ಯ, ನಾವಿಬ್ಬರೂ ಒಂದೇ ದೋಣಿಯಲ್ಲಿನ ಪ್ರಯಾಣಿಕರುಎನ್ನುವ ಭಾವಾರ್ಥದ ಮಾತುಗಳನ್ನಾಡಿದ್ದಾರೆ.

ಸಿದ್ಧಾರ್ಥ ಪ್ರಕರಣವನ್ನೇ ಗುರಿಯಾಗಿಸಿಕೊಂಡು ಮಲ್ಯ ಅವರು, ಈ ದೇಶದಲ್ಲಿನ ಸರ್ಕಾರಿ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಮೇಲೆ ಹರಿಹಾಯ್ದಿದ್ದಾರೆ.

‘ಸಿದ್ಧಾರ್ಥ ಅವರು ತಮ್ಮ ‘ಕೆಫೆ ಕಾಫಿ ಡೇ’ಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿಗೆ ಬರೆದ ಪತ್ರವನ್ನು ಓದಿ, ನಾನು ಬೇಸರಗೊಂಡಿದ್ದೇನೆ. ಈ ಬ್ಯಾಂಕ್‌ಗಳು, ಸರ್ಕಾರಿ ಸಂಸ್ಥೆಗಳು ಯಾರನ್ನೇ ಆದರೂ ಜಿಗುಪ್ಸೆಗೊಳಿಸುತ್ತದೆ. ನನ್ನ ವಿಷಯವನ್ನೇ ನೋಡಿ, ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಏನೆಲ್ಲ ಮಾಡುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಬ್ಯಾಂಕ್‌​ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್‌​ಗಳು ತಡೆಗೋಡೆಯಾಗಿವೆ ಎಂದು ಹೇಳಿದ್ದಾರೆ.

ಮೂರು ದಶಕಗಳಿಂದ ಭಾರತದ ಬಹುದೊಡ್ಡ ಮದ್ಯ ಕಂಪನಿಯನ್ನು ನಿರ್ವಹಿಸಿ ರಾಜ್ಯದ ಖಜಾನೆಗೆ ಸಾವಿರಕೋಟಿಯಷ್ಟು ಹಣ ಸಂಭಾವನೆ ನೀಡಿದ್ದೇನೆ. ಕಿಂಗ್ ಫಿಷರ್ ವಿಮಾನ ಸಂಸ್ಥೆ ಕೂಡಾ ಸಾಕಷ್ಟು ಹಣವನ್ನು ಸಂಭಾವನೆ ನೀಡಿದೆ. ಉತ್ತಮವಾಗಿದ್ದ ವಿಮಾನ ಸಂಸ್ಥೆ ನಷ್ಟವಾಯಿತು ಎಂದು ಈ ಹಿಂದೆ ಮಲ್ಯ ಟ್ವೀಟ್‌ ಮಾಡಿದ್ದರು.

ವಿಮಾನ ಇಂಧನ ದರ ಏರಿಕೆಯಾಗಿರುವ ಕಾರಣ ವಿಮಾನ ಸಂಸ್ಥೆ ಆರ್ಥಿಕ ಮುಗ್ಗಟ್ಟು ಅನುಭವಿಸಿದೆ. ಕಚ್ಛಾ ತೈಲ ಬ್ಯಾರೆಲ್‍ಗೆ 140 ಡಾಲರ್‌ವರೆಗೆ ದರ ಏರಿಕೆ ಮಾಡಿದಾಗ, ಕಿಂಗ್ ಫಿಷರ್‌ಗೆ ಆರ್ಥಿಕ ಸಮಸ್ಯೆ ಕಂಡು ಬಂತು. ಸಾಲದ ಹೊರೆ ಹೆಚ್ಚಾಯಿತು. ಹಾಗಾಗಿ ಬ್ಯಾಂಕ್ ಸಾಲವೂ ಏರಿಕೆಯಾಗುತ್ತಾ ಬಂತು ಎಂದು ಟ್ವೀಟ್‌ನಲ್ಲಿ ವಿವರಿಸಿದ್ದರು.

ನಾನು ಸಾಲ ಪಡೆದಿರುವ ಮೊತ್ತವನ್ನು ಮರು ಪಾವತಿಸಲು ನಾನು ಸಿದ್ಧನಿದ್ದೇನೆ. ಬ್ಯಾಂಕ್ ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ನಾನು ವಿನಂತಿಸುತ್ತೇನೆ. ಅದನ್ನು ಸ್ವೀಕರಿಸಲು ಸಿದ್ಧವಿಲ್ಲದಿದ್ದರೆ ಕಾರಣವೇನು?. ಬ್ಯಾಂಕ್‍ಗೆ ಸಾಲ ಮರುಪಾವತಿ ಮಾಡದೆ ಪರಾರಿಯಾದವ ಎಂದು ರಾಜಕಾರಣಿಗಳೂ, ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಇದೆಲ್ಲವೂ ಸುಳ್ಳು. ನಾನು ಹಣ ಪಾವತಿ ಮಾಡುತ್ತೇನೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಳಿದ್ದೆ, ಅದು ಯಾಕೆ ಯಾರಿಗೂ ಕೇಳಿಸುವುದಿಲ್ಲ? ಎಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಸಾಲ ಮರುಪಾವತಿ ಮಾಡದೇ ಇರುವ ಮಲ್ಯ ವಿರುದ್ಧ 2016ರಲ್ಲಿ ಬ್ಯಾಂಕ್‍ಗಳು ಕ್ರಮ ತೆಗೆದುಕೊಳ್ಳಲು ಮುಂದಾದ ವೇಳೆ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT