ನವದೆಹಲಿ: ಪಾಕ್ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಶುಕ್ರವಾರ ರಾತ್ರಿ 9.20ಕ್ಕೆ ಪಂಜಾಬ್ನ ಅಟಾರಿ ಗಡಿಯ ಮೂಲಕ ಭಾರತದ ನೆಲದ ಮೇಲೆ ಕಾಲಿಟ್ಟರು. ವೀರಯೋಧನಿಗೆ ಅರ್ಥಪೂರ್ಣ, ಸಂಭ್ರಮದ ಸ್ವಾಗತ ಕೋರಿದ ಸಾವಿರಾರು ಜನರು ಹರ್ಷೋದ್ಗಾರ ಮತ್ತು ಮುಗಿಲು ಮುಟ್ಟುವ ಘೋಷಣೆಗಳನ್ನು ಮೊಳಗಿಸಿದರು.
ಭಾರತೀಯ ವಾಯುಪಡೆಯ ಪರವಾಗಿ ವಾಯುಪಡೆಯ ಉಪ ಮುಖ್ಯಸ್ಥ ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ.ಕಪೂರ್ ಅಭಿನಂದನ್ ಅವರನ್ನು ತಾಯ್ನೆಲಕ್ಕೆ ಬರಮಾಡಿಕೊಂಡರು.
IAF Wing Commander #AbhinandanVarthaman returns to India. pic.twitter.com/0uvWUBchcx
— ANI (@ANI) March 1, 2019
ಅಭಿನಂದನ್ ಅಸ್ತಾಂತರ, ವೈದ್ಯಕೀಯ ಪರೀಕ್ಷೆ: ಕಪೂರ್
ಅಭಿನಂದನ್ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ. ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತಿದೆ. ವಿಮಾನ ಪತನವಾದಾಗ ಅವರು ಪ್ಯಾರಾಚೂಟ್ ಮೂಲಕ ಕೆಳಕ್ಕೆ ಜಿಗಿದ್ದು, ಗಾಯಗಳಾಗಿರಬಹುದು. ಆದ್ದರಿಂದ, ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಅಭಿನಂದನ್ ಹಿಂದಿರುಗಿರುವುದಕ್ಕೆ ಭಾರತೀಯ ವಾಯುಪಡೆ ಸಂತಸ ವ್ಯಕ್ತಪಡಿಸುತ್ತದೆಎಂದುಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ.ಕಪೂರ್ ಸುದ್ದಿಗಾರರಿಗೆ ತಿಳಿಸಿದರು.
ಮುಂಜಾನೆಯಿಂದಲೇ ವಾಘಾ–ಅಟಾರಿ ಗಡಿಯಲ್ಲಿ ಸಡಗರದ ವಾತಾವರಣವಿತ್ತು. ಅಭಿನಂದನ್ ಸ್ವದೇಶಕ್ಕೆ ಬರಲಿರುವ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಶುಕ್ರವಾರ ವಾಡಿಕೆಯಂತೆ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಸಲಿಲ್ಲ.
ಗಡಿಯ ಗೇಟ್ ಮೂಲಕ ಪಾಕ್ ನೆಲವನ್ನು ಎವೆಯಿಕ್ಕದೆ ನೋಡುತ್ತಿದ್ದ ಭಾರತೀಯರು ಅಭಿನಂದನ್ ಇದ್ದ ವಾಹನ ಕಾಣುತ್ತಿದ್ದಂತೆ ನಗು ತುಳುಕಿಸಿ, ಕೈಬೀಸಿದರು. ಅಭಿನಂದನ್ ಸಂಜೆ ವಾಘಾ (ಪಾಕ್ ನೆಲ) ಗಡಿ ತಲುಪಿದರು. ವಿಷಯ ತಿಳಿದ ತಕ್ಷಣ ಅಟ್ಟಾರಿಯಲ್ಲಿ (ಭಾರತದ ನೆಲ) ನೆರೆದಿದ್ದ ಸಾವಿರಾರು ಜನರು ಅಭಿನಂದನ್ ಮತ್ತು ಭಾರತೀಯ ಸೇನೆಯ ಪರವಾಗಿ ಘೋಷಣೆಗಳನ್ನು ಕೂಗಿದರು. ಹೂ ಎರಚಿ, ಡೋಲುಗಳ ದನಿಯ ಸಂಭ್ರಮದೊಂದಿಗೆ ಸ್ವಾಗತಿಸಲು ಅವರೆಲ್ಲರೂ ಸಜ್ಜಾಗಿದ್ದರು. ವಾಘಾದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಹಸ್ತಾಂತರ ಪ್ರಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡ ನಂತರ ಕೆಲ ಕಾಗದ ಪತ್ರಗಳಿಗೆ ಸಹಿ ಹಾಕಿದ ಅಭಿನಂದನ್ ಭಾರತದತ್ತ ಬಂದರು.
ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಬುಧವಾರ ಪಾಕ್ ವಾಯುಪಡೆಯ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ಅಭಿನಂದನ್ ತಮ್ಮ ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ಸಂದರ್ಭ ಶತ್ರುದೇಶದ ಕ್ಷಿಪಣಿಯೊಂದು ತಾಗಿ ಅಭಿನಂದನ್ ಅವರಿದ್ದ ಮಿಗ್ ವಿಮಾನ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹೊರಜಿಗಿದ ಅಭಿನಂದನ್ ನೆಲ ಮುಟ್ಟಿದ ಸ್ಥಳ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿತ್ತು. ಸ್ಥಳೀಯರಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾದಾಗ ತಮ್ಮ ಬಳಿ ಇದ್ದ ದಾಖಲೆಗಳನ್ನು ಅಭಿನಂದನ್ ನಾಶಪಡಿಸಿದ್ದರು.
ಸ್ಥಳೀಯರಿಂದ ಹಲ್ಲೆಗೊಳಗಾದ ಅಭಿನಂದನ್ ಅವರನ್ನು ನಂತರ ಪಾಕ್ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸುವ, ಅವರು ತನ್ನ ವಶದಲ್ಲಿರುವ ವಿಡಿಯೊಗಳನ್ನು ಪಾಕ್ ಗುರುವಾರ ಬಿಡುಗಡೆ ಮಾಡಿತ್ತು. ಜಿನಿವಾ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಸಂಜೆ ಪಾಕ್ ಸಂಸತ್ತಿನಲ್ಲಿ ‘ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆ ಮಾಡಲಾಗುವುದು’ ಎಂದು ಘೋಷಿಸಿದ್ದರು.
ಭಾರತ ಸರ್ಕಾರವು ಅಭಿನಂದನ್ ಅವರನ್ನು ವಾಯುಮಾರ್ಗದಲ್ಲಿ ಕರೆತರಲು ಉದ್ದೇಶಿಸಿತ್ತು. ಆದರೆ ಪಾಕ್ ಸರ್ಕಾರ ಸ್ಪಂದಿಸದ ಕಾರಣ ಭೂಮಾರ್ಗದಲ್ಲಿಯೇ, ವಾಘಾ–ಅಟ್ಟಾರಿ ಗಡಿಯ ಮೂಲಕ ಅಭಿನಂದನ್ ಭಾರತ ಪ್ರವೇಶಿಸಿದರು. ನೆರೆದಿದ್ದ ಸಾವಿರಾರು ಜನರು ದೇಶದ ಹೆಮ್ಮೆಯ ವೀರಯೋಧನನ್ನು ತೆರೆದ ಕರದಿಂದ ಸ್ವಾಗತಿಸಿದರು. ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾದ ಕಾರಣ ಅಭಿನಂದನ್ ಭಾರತಕ್ಕೆ ಬರುವುದು ತಡವಾಯಿತು.
ಇವನ್ನೂ ಓದಿ
*ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್ಬುಕ್ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್? ವಿಡಿಯೊ ಬಿಡುಗಡೆ
*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್ ಪ್ರಧಾನಿಯ ಪಕ್ಷ
*ಪೈಲಟ್ ಅಭಿನಂದನ್ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್ಗೆ ಐಟಿ ಸಚಿವಾಲಯ ಆಗ್ರಹ
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.