ಕೊಲ್ಕತ್ತಾ:‘ಪೌರತ್ವ ತಿದ್ದುಪಡಿ ಕಾಯ್ದೆ ಬಂಗಾಳದಲ್ಲಿ ಅನುಷ್ಠಾನಗೊಳಿಸುವುದಿಲ್ಲ. ಹಾಗೆಯೇ ನಾನು ಸತ್ತರೂ ಇಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಜೆಪಿಗೆ ಬಿಡುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
‘ಇಂಡೊ–ಬಾಂಗ್ಲಾ ಗಡಿಯಲ್ಲಿನ 24 ಉತ್ತರ ಪರಗಣ ಜಿಲ್ಲೆಯಲ್ಲಿ ಮೇಳವೊಂದನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಾನು ಎಲ್ಲಿಯವರೆಗೂ ಬದುಕಿರುತ್ತೇನೊ ಅಲ್ಲಿಯವರೆಗೆ ಬಂಗಾಳದಲ್ಲಿ ಸಿಎಎ ಅನುಷ್ಠಾನವಾಗುವುದಿಲ್ಲ. ಯಾರೂ ಈ ದೇಶ ಅಥವಾ ರಾಜ್ಯ ಬಿಟ್ಟು ಹೋಗುವ ಸ್ಥಿತಿ ಬರುವುದಿಲ್ಲ’ ಎಂದರು.
‘ಬಂಧನ ಕೇಂದ್ರಗಳನ್ನು ನಿರ್ಮಿಸುವುದಾಗಿ ಅವರು ಹೇಳುತ್ತಿದ್ದಾರೆ. ಇಲ್ಲಿ ಅಧಿಕಾರದಲ್ಲಿರುವುದು ಯಾರು ? ನಾವು. ನನ್ನ ಜೀವವನ್ನಾದರೂ ನೀಡುತ್ತೇನೆ ಹೊರತು ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಡುವುದಿಲ್ಲ’ ಎಂದರು.
‘ಬಂಧನ ಕೇಂದ್ರಗಳನ್ನು ನಿರ್ಮಿಸುವುದು ರಾಜ್ಯ ಸರ್ಕಾರದ ಕೆಲಸ. ಅವರು ಅಸ್ಸಾಂನಲ್ಲಿ ಅದನ್ನು ಮಾಡಬಹುದು. ಏಕೆಂದರೆ ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವರು ಚುನಾಯಿತ ಸರ್ಕಾರ ಎಂದರೆ, ನಮ್ಮದೂ ಚುನಾಯಿತ ಸರ್ಕಾರವೇ. ದೆಹಲಿಯಲ್ಲಿ ಅವರಿಗೆ ಹಕ್ಕಿದ್ದರೆ, ಇಲ್ಲಿ ನಮಗೆ ಹಕ್ಕಿದೆ ಎಂದು ಹೇಳಿದರು.
‘ಈ ಕಾಯ್ದೆ ಏನು ಹೇಳುತ್ತದೆ ಗೊತ್ತಾ. ನೀವು ಭಾರತೀಯರಾಗಿದ್ದಿರಿ. ಈಗ ನೀವು ಹೊರಗಿನವರು ಮತ್ತು ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬೇಕು. ಪೌರತ್ವ ನೀಡಬೇಕೆ, ಬೇಡವೇ ಎನ್ನುವುದನ್ನು ಅವರು ನಿರ್ಧರಿಸುತ್ತಾರಂತೆ’ ಎಂದು ಕಾಯ್ದೆ ಕುರಿತು ವಿವರಿಸಿದರು.