ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಶೃಂಗೇರಿ ಶಾರದಾಂಬೆ ಮತ್ತು ಗುರುಗಳ ಸನ್ನಿಧಿಯಲ್ಲಿ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಬಿ ಫಾರಂ ಇರಿಸಿ, ವಿಶೇಷಪೂಜೆ ಸಲ್ಲಿಸಲಾಯಿತು.
ತೋರಣ ಗಣಪತಿ ದೇವಾಲಯದ ಮುಂದೆ ಬಿ ಫಾರಂ ಇರಿಸಿ, ಒಂಬತ್ತು ಈಡುಗಾಯಿಗಳನ್ನು ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆದರೆ, ಒಂದು ಈಡುಗಾಯಿ ಒಡೆಯಲಿಲ್ಲ. ಅದನ್ನು ನೋಡಿ ಮುಖ್ಯಮಂತ್ರಿ ಕೆಲ ಕ್ಷಣ ಭಾವುಕರಾದರು. ಬಳಿಕ ಪಟ್ಟಣದ ಕಾಳಿಕಾಂಬ ಮತ್ತು ದುರ್ಗಾಂಬ ದೇವಾಲಯಗಳಿಗೆ ತೆರಳಿ, ಪೂಜೆ ನೆರವೇರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಕುಟುಂಬದ ನಂಬಿಕೆಯಂತೆ ಶಾರದಾಂಬೆಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆ ಎಂಬ ಯುದ್ಧದಲ್ಲಿ ಹೋರಾಟ ಮಾಡಬೇಕಿದೆ. ನಿಖಿಲ್ ಮಾತ್ರವಲ್ಲ, ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವರು. ಈ ಎಲ್ಲ ಕ್ಷೇತ್ರಗಳ ಹೋರಾಟಕ್ಕೆ ದೇವಿ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇವೆ’ ಎಂದು ತಿಳಿಸಿದರು.