ಮೈಸೂರು: ದೇಶದ್ರೋಹ ಪ್ರಕರಣದಲ್ಲಿ ವಕಾಲತ್ತು ವಹಿಸಬಾರದೆಂಬ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂದು, ಮಂಜುಳಾ ಮಾನಸ ನೇತೃತ್ವದಲ್ಲಿ ಹಲವು ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದ್ದಾರೆ.
‘ಸಂವಿಧಾನದ 22(1)ನೇ ವಿಧಿ ಮತ್ತು ಸಿಆರ್ಪಿಸಿ ಸೆಕ್ಷನ್ 303 ಪ್ರಕಾರ ಪ್ರತಿಯೊಬ್ಬ ಆರೋಪಿಗೂ ತನ್ನ ಆಯ್ಕೆಯ ಒಬ್ಬ ವಕೀಲರನ್ನು ಪಡೆದು ನ್ಯಾಯಾಲಯದಲ್ಲಿ ವಾದ ಮಂಡಿಸುವ ಹಕ್ಕು ಇದೆ. ಹೀಗಿರುವಾಗ, ಸಂಘವು ತೆಗೆದುಕೊಂಡ ತೀರ್ಮಾನವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಕೂಡಲೇ ನಿರ್ಣಯವನ್ನು ವಾಪಸ್ ಪಡೆಯಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ, ‘ಪುನರ್ ಪರಿಶೀಲಿಸಲು ಮನವಿ ಪತ್ರ ನೀಡಿದ್ದಾರೆ. ಮತ್ತೆ, ಕಾರ್ಯಕಾರಿ ಸಮಿತಿ ಸಭೆ ಕರೆದು ಸಾಮಾನ್ಯ ಸಭೆ ಕರೆಯಬೇಕೇ ಬೇಡವೇ ಎಂಬುದನ್ನು ಚರ್ಚಿಸಲಾಗುವುದು’ ಎಂದು ತಿಳಿಸಿದರು.