ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿಗೆ ಕಾಯದೇ ವೈದ್ಯರ ನೇಮಿಸಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಹೆಚ್ಚುತ್ತಿರುವ ಕೋವಿಡ್‌–ಬಿಎಸ್‌ವೈ ಆತಂಕ
Last Updated 22 ಮೇ 2020, 22:19 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯ ವೈದ್ಯರ ಅಗತ್ಯವಿರುವುದರಿಂದ ಸರ್ಕಾರದ ಅನುಮತಿಗೆ ಕಾಯದೇ ತಕ್ಷಣವೇ ವೈದ್ಯರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದರು.

ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚುತ್ತಿರುವ ಕಾರಣ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಶುಕ್ರವಾರ ಸಭೆ ನಡೆಸಿದರು.

ನಿವೃತ್ತ ವೈದ್ಯರನ್ನೂ ನೇಮಿಸಿಕೊಳ್ಳಬಹುದು. ಯಾರನ್ನೇ ನೇಮಿಸಿಕೊಂಡರೂ ಅವರಿಗೆ ಒಳ್ಳೆಯ ವೇತನ ಕೊಡಬೇಕು. ಇದಕ್ಕೆ ಕಡತ ಸಿದ್ಧ ಮಾಡಿಕೊಂಡು ಸರ್ಕಾರದ ಅನುಮತಿ ಪಡೆಯಬೇಕು ಎಂದೆಲ್ಲ ತಡ ಮಾಡಬೇಡಿ. ಮೊದಲು ವೈದ್ಯರನ್ನು ನೇಮಿಸಿಕೊಳ್ಳಿ ಬಳಿಕ ಕಡತವನ್ನು ಕಳುಹಿಸಿ ಎಂದು ಸೂಚಿಸಿದರು.

ಈ ವೈದ್ಯರ ಸೇವೆಯನ್ನು ಕೋವಿಡ್‌ ಮುಗಿಯುವವರೆಗೆ ಬಳಸಿಕೊಳ್ಳಿ. ಅಲ್ಲದೆ, ಕೋವಿಡ್‌ ಹೆಚ್ಚುತ್ತಿರುವ ಕಾರಣ ಪ್ರತಿಯೊಂದ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆಯನ್ನು 50 ರಷ್ಟು ಹೆಚ್ಚಿಸಬೇಕು. 100 ಹಾಸಿಗೆ ಇರುವ ಕಡೆಗಳಲ್ಲಿ 150ಕ್ಕೆ ಏರಿಸಿ. ರೋಗಿಗಳು ಭರ್ತಿ ಆದ ಮೇಲೆ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಓಡಾಡಬೇಡಿ ಎಂದು ಕಟ್ಟಪ್ಪಣೆ ಮಾಡಿದರು. ಹೊರ ರಾಜ್ಯಗಳಿಂದ ಬರುತ್ತಿರುವವರಿಂದ ಕೋವಿಡ್‌ ಸಂಖ್ಯೆ ಹೆಚ್ಚುತ್ತಿದೆ. ಗಡಿಗಳನ್ನು ಕಟ್ಟುನಿಟ್ಟಾಗಿ ಬಂದ್‌ ಮಾಡಬೇಕು. ಮೇ 31 ರವರೆಗೆ ಯಾರನ್ನೂ ರಾಜ್ಯದೊಳಗೆ ಬಿಡಬೇಡಿ ಎಂದರು.

ಕೋವಿಡ್‌ ನಿರ್ವಹಣೆಗೆ ವಿಶೇಷ ವಿಭಾಗ

ಕೋವಿಡ್‌ ನಿರ್ವಹಣೆಗೆ ಪ್ರತ್ಯೇಕ ವಿಭಾಗವೊಂದನ್ನು ಆರಂಭಿಸಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿ ಬಂದಿತು.

ಹಲವು ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಈಗ ಕೋವಿಡ್‌ ನಿರ್ವಹಣೆ ಕಾರ್ಯದಲ್ಲಿಯೇ ತೊಡಗಿದ್ದಾರೆ. ಜೂನ್‌ ಬಳಿಕ ಅವರವರ ಇಲಾಖೆಗಳ ಕೆಲಸವನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಇಲಾಖೆಗಳ ಕೆಲಸ ಸ್ಥಗಿತವಾಗುತ್ತದೆ. ಆದ್ದರಿಂದ ಕೋವಿಡ್‌ ನಿರ್ವಹಣೆಗೇ ಪ್ರತ್ಯೇಕ ವಿಭಾಗ ತೆರೆದು ವಿವಿಧ ಇಲಾಖೆಗಳ ಸಮನ್ವಯಗೊಳಿಸಿ ಕಾರ್ಯ ನಿರ್ವಹಿಸುವಂತಾಗಬೇಕು ಎಂಬ ಸಲಹೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT