ಕಲಬುರ್ಗಿ: ಎಟಿಎಂ ಕಳವು ಮಾಡುವುದು ಹೇಗೆ ಎಂದು ಯೂ–ಟೂಬ್ನಲ್ಲಿ ಹುಡುಕಿದ ಮೂವರು ಯುವಕರು, ಅದೇ ಮಾದರಿಯಲ್ಲಿ ಭಾನುವಾರ ನಸುಕಿನಲ್ಲಿ ಕಳವು ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ಸಮೀರ್ ಇಕ್ಬಾಲ್ ಟಪ್ಪಾ, ಆಸಿಫ್ ಮಲಂಗಸಾಬ್ ಮಕಾನದಾರ್ ಹಾಗೂ ಹುಸೇನಿ ಬಾಬು ಮುಜಾವರ್ ಬಂಧಿತರು. ಇವರ ವಯಸ್ಸು 18.
ಎಟಿಎಂ ತಂತ್ರಜ್ಞಾನ ಹೇಗಿರುತ್ತದೆ? ಹಣ ಎಲ್ಲಿ ಸಂಗ್ರಹವಾಗುತ್ತದೆ? ಅದನ್ನು ಸುಲಭವಾಗಿ ಹೇಗೆ ಒಡೆಯಬಹುದು? ಎಂಬುದನ್ನು ಇವರುಯೂ–ಟೂಬ್ನಲ್ಲಿ ವಿಡಿಯೊಗಳ ಮೂಲಕ ತಿಳಿದುಕೊಂಡಿದ್ದರು. ಮೂರು ದಿನಗಳು ನಗರದ ವಿವಿಧೆಡೆ ಸುತ್ತಾಡಿ ಕಳವು ಮಾಡಲು ಸುಲಭವಾಗುವ ಎಟಿಎಂ ಹುಡುಕಿದ್ದರು.
ದೊಣ್ಣೆ, ರಾಡ್ಗಳ ಸಮೇತ ಇಲ್ಲಿನ ಆಳಂದ ಚೆಕ್ಪೋಸ್ಟ್ ರಸ್ತೆಯ ಶಾಂತಪ್ಪ ಕಡಗಂಚಿ ಕಾಂಪ್ಲೆಕ್ಸ್ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಅನ್ನು ಒಡೆಯಲು ಯತ್ನಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದರು ಎಂದು ರಾಘವೇಂದ್ರ ಠಾಣೆಯ ಪಿಎಸ್ಐ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.