ಬೆಂಗಳೂರು: ‘ನಾನು ಯಾವುದೇ ಆಸ್ತಿ ಹೊಡೆದಿಲ್ಲ. ಸಚಿವ ರಮೇಶ ಜಾರಕಿಹೋಳಿ ಆರೋಪ ನೋವು ತಂದಿದೆ’ ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು.
ಸರ್ವೋದಯ ಶಿಕ್ಷಣ ಟ್ರಸ್ಟ್ನಲ್ಲಿ ಅಕ್ರಮ ಆರೋಪ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ರಮೇಶ ಜಾರಕಿಹೊಳಿ ಬರೆದ ಪತ್ರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ‘ರಮೇಶ ಜಾರಕಿಹೋಳಿ ಹೇಳಿಕೆ ಸುಳ್ಳು’ ಎಂದರು.
‘ಹಿಂದೆ ನಾನು ಸಚಿವ ಆಗಿದ್ದಾಗ ಟ್ರಸ್ಟ್ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಟ್ಟಿದ್ದೆ. ನನ್ನ ಸಚಿವ ಸ್ಥಾನ ಅವಧಿ ಮುಗಿದ ಬಳಿಕ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೆ. ಈಗ ಸಭಾಪತಿ ಆದ ಮೇಲೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿದ್ದೇನೆ. ನನಗೂ ಆ ಸಂಸ್ಥೆಗೂ ಈಗ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಮೇಶ ಜಾರಕಿಹೋಳಿ 2014ರಲ್ಲಿ ಯಾಕೆ ದೂರು ನೀಡಿಲ್ಲ. ನನ್ನ ಹೆಸರು ಈಗ ಯಾಕೆ ತಂದಿದ್ದಾರೋ ಗೊತ್ತಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆಯೊ ಗೊತ್ತಿಲ್ಲ’ ಎಂದರು.
‘ಈ ಬಗ್ಗೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದರೆ, ಸ್ಪಷ್ಟನೆ ನೀಡುತ್ತಿದ್ದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ತೀರ್ಪಿನಂತೆ ನಡೆದುಕೊಳ್ಳುತ್ತೇನೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ’ ಎಂದರು.