ದಾವಣಗೆರೆ: ‘ಇದೇ ತಿಂಗಳ 30ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ’ ಎಂದು ಶಾಸಕ ಬಿ.ಸಿ. ಪಾಟೀಲ್ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬುದು ತಪ್ಪು. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಇದಕ್ಕಾಗಿ ಸ್ವಲ್ಪ ವಿಳಂಬ ಆಗಬಹುದು. ಈ ಕಾರಣಕ್ಕೆ ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದರು.
‘17 ಜನರಲ್ಲಿ ಕೆಲವರಿಗಷ್ಟೇ ಸಚಿವ ಸ್ಥಾನ ನೀಡುವ ಬಗ್ಗೆ ಎಲ್ಲೂ ಮುಖ್ಯಮಂತ್ರಿಗಳಾಗಲೀ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಲೀ ಹೈಕಮಾಂಡ್ ಆಗಲೀ ಎಲ್ಲೂ ಹೇಳಿಲ್ಲ. ಇವೆಲ್ಲಾ ಊಹಾಪೋಹ. ಏನು ಆಗಬೇಕು ಎಲ್ಲವೂ ಮಂತ್ರಿಮಂಡಲ ವಿಸ್ತರಣೆ ದಿವಸ ಗೊತ್ತಾಗುತ್ತದೆ’ ಎಂದು ಹೇಳಿದರು.
ಮಾಧುಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ. ಚರ್ಚೆ ಮಾಡಲು ನಾನು ಅರ್ಹ ವ್ಯಕ್ತಿ ಅಲ್ಲ. ನನಗೆ ಯಾವ ಖಾತೆ ಕೊಟ್ಟರೂ ಆಗುತ್ತದೆ. ಆದರೆ ಕೂಸು ಹುಟ್ಟುವುದಕ್ಕಿಂತ ಮುಂಚೆಯೇ ಕುಲಾವಿ ಹೊಲಿಸುವುದು ಹೇಗೆ ಎಂದು ಪ್ರಶ್ನಿಸಿದರು.
17 ಜನ ಒಟ್ಟಾಗಿದ್ದೇವೆ ಎಂದು ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈಗ ಸದ್ಯಕ್ಕೆ ಇಲ್ಲಿ ನಾನೊಬ್ಬನೇ ಇದ್ದೇನೆ. ಎಲ್ಲರದ್ದೂ ಒಂದೇ ಭಾವನೆ ಇರಲ್ಲ. ವ್ಯತಿರಿಕ್ತವಾಗಿ ಅಭಿಪ್ರಾಯಗಳಿರುತ್ತೆ. ಅವರವರ ಮನಸ್ಥಿಗೆ ತಕ್ಕಂತೆ ಹೇಳುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.