ಕೃಷ್ಣಾ ನದಿ ಉಕ್ಕುತ್ತಿದ್ದರೂ ರಾಯಚೂರಿನ ಅಗ್ರಹಾರ, ಕುರ್ವಕಲಾ ಹಾಗೂ ಕುರ್ವಕುರ್ದಾ ನಡುಗಡ್ಡೆಗಳಲ್ಲಿಯ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಬರುತ್ತಿಲ್ಲ. ಅಗತ್ಯ ವಸ್ತುಗಳನ್ನು ಪಡೆಯಲು ತೆಪ್ಪಗಳ ಮೂಲಕ ಈಚೆಗೆ ಬರುತ್ತಿದ್ದು, ಎನ್ಡಿಆರ್ಎಫ್ ತಂಡದವರು ಅವರನ್ನು ಬೋಟ್ಗಳಲ್ಲಿ ಅವರ ನಡುಗಡ್ಡೆಗಳಿಗೆ ಬಿಟ್ಟು ಬರುತ್ತಿದ್ದಾರೆ! ‘ಪ್ರವಾಹ ಹೆಚ್ಚಾಗುತ್ತಿರುವುದರಿಂದ ನದಿಯಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದೇವೆ. ಆದರೂ ಅವರು ನಮ್ಮ ಮಾತು ಕೇಳುತ್ತಿಲ್ಲ. ಪ್ರವಾಹ ತಮಗೆ ಹೊಸದಲ್ಲ ಎನ್ನುತ್ತ ತೆಪ್ಪಗಳಲ್ಲಿ ಸಂಚರಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಮೂರು ನಡುಗಡ್ಡೆಗಳಲ್ಲಿ ಒಟ್ಟು 298 ಕುಟುಂಬಗಳ 945 ಜನ ವಾಸಿಸುತ್ತಿದ್ದಾರೆ.