ಬೆಂಗಳೂರು: ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಬಳಿ ಸಿಕ್ಕಿದ್ದು ಪುಟಗೋಸಿ ಹಣ ಎಂದಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೋಟ್ಯಂತರ ರೂಪಾಯಿಯ ಭ್ರಷ್ಟಾಚಾರ ನಡೆಸಲು ಪ್ರಚೋದನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಕಿಡಿಕಾರಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ‘ವಿಜಯ ಲಕ್ಷ್ಯ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
‘ದಿನೇಶ್ ಭ್ರಷ್ಟ ರಾಜಕಾರಣಿ. ಅವರಿಗೆ ನಾಚಿಕೆಯಾಗಬೇಕು. ಅಲ್ಲಿ ಸಿಕ್ಕಿದ್ದು ಭ್ರಷ್ಟಾಚಾರದ ಹಣ. ಕಾಂಗ್ರೆಸ್ ಪಕ್ಷ ಈಗ ಭ್ರಷ್ಟರನ್ನು ಬಚಾವ್ ಮಾಡಲು ಮುಂದಾಗಿದೆ’ ಎಂದು ಅವರು ಹೇಳಿದರು.
‘ರಕ್ಷಣಾ ಇಲಾಖೆಗೆ ಜೀಪುಗಳ ಖರೀದಿಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಭ್ರಷ್ಟಾಚಾರ ಮಾಡಿದ್ದರು. ಅದು ದೇಶದ ಮೊದಲ ಹಗರಣ. ಆ ಪರಂಪರೆ ಈಗಲೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದೆ’ ಎಂದರು.
‘ಕಾಂಗ್ರೆಸ್ ಪಕ್ಷ ಗಾಂಧಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ವರ್ಷಗಳೇ ಕಳೆದವು. ಆ ಪಕ್ಷಕ್ಕೆ ಸ್ವಾಭಿಮಾನ ಇದ್ದರೆ ನೆಹರೂ ಇತಿಹಾಸ ಕೈಬಿಟ್ಟು ಸ್ವಾಮಿ ವಿವೇಕಾನಂದರ ಇತಿಹಾಸ ಪರಂಪರೆ ಅಳವಡಿಸಿಕೊಳ್ಳಬೇಕು’ ಎಂದರು.
ಯುವ ಮೋರ್ಚಾ ರಾಜ್ಯ ಪ್ರಭಾರಿ ಮಧುಕೇಶವ ದೇಸಾಯಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ವರ್ಷಗಳಲ್ಲಿ 12 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಮೂಲಕ ಯುವಜನರಲ್ಲಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿದೆ’ ಎಂದರು.