ಬೆಂಗಳೂರು: ಅಧಿಕಾರ ಬಂದಾಗ ಪಕ್ಷದ ಕಾರ್ಯಕರ್ತರು ಮೊದಲಾಗಿ ದೂರವಾಗುವ ಅಪಾಯ ಇದೆ. ಇದನ್ನು ತಪ್ಪಿಸುವ ಸಲುವಾಗಿ ಕಾರ್ಯಕರ್ತರ ಅಹವಾಲುಗಳನ್ನು ಪಕ್ಷದ ಕಚೇರಿಯಲ್ಲಿ ಕುಳಿತು ಆಲಿಸುವ ಪರಿಪಾಠ ಬಿಜೆಪಿ ಕಚೇರಿಯಲ್ಲಿ ಆರಂಭವಾಗಿದೆ.
ಶನಿವಾರ ಬೆಳಿಗ್ಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಜೃತಿ, ಸಕ್ಕರೆ ಸಚಿವ ಸಿ.ಟಿ.ರವಿ ಅವರು ಹೀಗೆ ಅಹವಾಲು ಆಲಿಸಿದರು.
ಸ್ವತಃ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಅಹವಾಲು ನೀಡಿದ್ದು ವಿಶೇಷವಾಗಿತ್ತು.
'ನಾನು ನಡೆಸುತ್ತಿರುವ ಎರಡನೇ ಅಹವಾಲು ಸ್ವೀಕಾರ ಕಾರ್ಯಕ್ರಮ ಇದು. ಸಚಿವರಾದ ಲಕ್ಮ್ಷಣ ಸವದಿ, ಅಶ್ವತ್ಥನಾರಾಯಣ ಅವರೂ ಇಂತಹ ಅಹವಾಲು ಸ್ವೀಕಾರ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಇದೇ ಹಾದಿ ತುಳಿಯಲಿದ್ದಾರೆ. ನಿರ್ದಿಷ್ಟ ದಿನಾಂಕ ನಿಗದಿಪಡಿಸುವ ವಿಚಾರವೂ ಇದೆ ಎಂದರು.
'ಅಧಿಕಾರ ಸಿಕ್ಕಿದಾಗ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ ಸಚಿವರು ಸಿಗುವುದು ಕಡಿಮೆಯಾಗುತ್ತದೆ. ಆಗ ಮೊದಲಾಗಿ ನಮ್ಮಿಂದ ದೂರವಾಗುವವರು ಕಾರ್ಯಕರ್ತರು. ಕಮ್ಯುನಿಸ್ಟ್ ಪಕ್ಷದವರಲ್ಲಿ ಈಗಲೂ ಈ ವ್ಯವಸ್ಥೆ ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವತಃ ಮುಖ್ಯಮಂತ್ರಿ ಅವರೇ ಪಕ್ಷದ ಕಚೇರಿಗೆ ಬಂದು ಅಹವಾಲು ಆಲಿಸುತ್ತಿದ್ದರು. ರಾಜ್ಯದಲ್ಲಿ ಇಂತಹ ವ್ಯವಸ್ಥೆ ರೂಪಿಸುವ ಸಲುವಾಗಿ ನಾನು ಕಾರ್ಯಕ್ರಮ ರೂಪಿಸಿದ್ದೇನೆ' ಎಂದು ಸಚಿವ ರವಿ 'ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.