ಚಾಮರಾಜನಗರ: ರಾಮನಗರದಲ್ಲೂ ಕೋವಿಡ್-19 ಪ್ರಕರಣ ದಾಖಲಾಗುವುದರೊಂದಿಗೆ, ಇಡೀ ರಾಜ್ಯದಲ್ಲೇ ಗಡಿ ಜಿಲ್ಲೆ ಚಾಮರಾಜನಗರ ಕೋವಿಡ್-19 ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ.
ಈ ವಿಚಾರವಾಗಿ ವಾಟ್ಸ್ಆ್ಯಪ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹಾಸ್ಯಭರಿತ ಹಾಗೂ ಜಿಲ್ಲೆಯ ಜನರು ಹೆಮ್ಮೆ ಪಡುವ ಸಂದೇಶಗಳು, ಮೀಮ್ಗಳು ಹರಿದಾಡುತ್ತಿವೆ.
'ಕೊನೆಗೂ ಕೊರೊನಾ ಕಪ್ ಗೆದ್ದ ಚಾಮರಾಜನಗರ' 'ಈ ಸಲ ಕಪ್ ನಮ್ದೇ', 'ಮುಖ್ಯಮಂತ್ರಿ, ರಾಜಕಾರಣಿಗಳಿಗೆ ಮಾತ್ರವಲ್ಲ, ಕೊರೊನಾಗೂ ನಮ್ಮ ಜಿಲ್ಲೆ ಕಂಡರೆ ಭಯ' ಎಂಬಂತಹ ಸಂದೇಶಗಳು ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.
ಚಿಕ್ಕಮಗಳೂರಿನಲ್ಲಿ ಕೋವಿಡ್-19 ದೃಢ ಪಟ್ಟ ಸಂದರ್ಭದಲ್ಲೂ, 'ಫೈನಲ್ಗೆ ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು ರನ್ ಔಟ್' ಎಂಬ ಸಂದೇಶ ವೈರಲ್ ಆಗಿತ್ತು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೂಡ ಫೇಸ್ಬುಕ್ನಲ್ಲಿ, 'ಇಡೀ ರಾಜ್ಯದಲ್ಲೇ ಚಾಮರಾಜನಗರ ಹಸಿರು ವಲಯದಲ್ಲಿರುವ ಏಕೈಕ ಜಿಲ್ಲೆಯಾಗಿದೆ. ಇದೇ ಸ್ಥಿತಿಯಲ್ಲಿ ಮುಂದುವರಿಯಲು ಎಲ್ಲರ ಸಹಕಾರ ಬೇಕು' ಎಂದು ಮನವಿ ಮಾಡಿದ್ದಾರೆ. ಕೋವಿಡ್-19 ತಡೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸರ್ಕಾರ ಹಾಗೂ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ