ಹುಬ್ಬಳ್ಳಿ: ರಾಜ್ಯ ಸರ್ಕಾರದ ‘ವರ್ಷಧಾರೆ’ ಯೋಜನೆಯಡಿ, ಉತ್ತರ ಕರ್ನಾಟಕ ಭಾಗದ ಬರಪೀಡಿತ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆಗೆ ಬುಧವಾರ ಚಾಲನೆ ನೀಡಲಾಯಿತು.
ಇಲ್ಲಿನ ವಿಮಾನ ನಿಲ್ದಾಣದಿಂದ ಸಂಜೆ 4.50ಕ್ಕೆ ಕಾರ್ಯಾಚರಣೆ ಆರಂಭಿಸಿದ ವಿಮಾನವು ಸಂಜೆ 5.57ರವರೆಗೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಂಡಿ, ಬಾದರದಿನ್ನಿ, ಹೊನ್ಯಾಳ ವ್ಯಾಪ್ತಿಯಲ್ಲಿ 16 ಪ್ಲೈಯರ್ಸ್ಗಳನ್ನು ಉರಿಸಿದೆ.
ಮೋಡ ಬಿತ್ತನೆಯಾದ ಬಳಿಕ ಸಂಜೆ 6 ಗಂಟೆಗೆ ಬೀಳಗಿ, ಬಾಡಗಂಡಿ ವ್ಯಾಪ್ತಿಯಲ್ಲಿ ಅರ್ಧ ತಾಸು ಉತ್ತಮ ಮಳೆಯಾಗಿರುವುದಾಗಿ ವರದಿಯಾಗಿದೆ.
ಜುಲೈ 25ರಿಂದ ಆರಂಭಗೊಂಡಿರುವ ಮೋಡ ಬಿತ್ತನೆಯೂ 90 ದಿನಗಳ ಕಾಲ ರಾಜ್ಯದಲ್ಲಿ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಭೂವಿಜ್ಞಾನಿ ಹಾಗೂ ಮೋಡ ಬಿತ್ತನೆ ಯೋಜನೆಯ ನೋಡಲ್ ಅಧಿಕಾರಿ ಡಾ.ಎಸ್.ಚಿದಾನಂದಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆ ಮೋಡಗಳ ಅಧ್ಯಯನ ಸಂಬಂಧ ರಾಜ್ಯದ ಗದಗ, ಸುರಪುರ ಮತ್ತು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಒಟ್ಟು ಮೂರು ರೇಡಾರ್ ಅಳವಡಿಸಲಾಗಿದೆ. ಹುಬ್ಬಳ್ಳಿ ಮತ್ತು ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು.
ಎರಡು ವರ್ಷಗಳ ಅವಧಿಯ ಮೋಡ ಬಿತ್ತನೆಯನ್ನು ‘ಕ್ಯಾತಿ ಕ್ಲೈಮೇಟ್ ಮಾಡಿಫಿಕೇಶನ್’ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ವರ್ಷ ₹ 45 ಕೋಟಿ ಮತ್ತು ಮುಂದಿನ ವರ್ಷ ₹ 46 ಕೋಟಿಯನ್ನು ಮೀಸಲಿಡಲಾಗಿದೆ. ಮುಂದಿನ ವರ್ಷ ಮುಂಗಾರು ಮಾರುತ ಆಧರಿಸಿ ಮೋಡ ಬಿತ್ತನೆ ಬೇಕೇ, ಬೇಡವೇ ಎಂಬುದು ನಿರ್ಧಾರವಾಗಲಿದೆ ಎಂದರು.
ಅಮೆರಿಕಾದ ಎರಡು ಅತ್ಯಾಧುನಿಕ ವಿಮಾನಗಳನ್ನು ಮೋಡ ಬಿತ್ತನೆಗೆ ಬಳಸಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲೇ ಮೋಡ ಬಿತ್ತನೆ ಆರಂಭಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.