ಹೊಸಪೇಟೆ: ‘ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಮನೆಯ ಗೃಹ ಪ್ರವೇಶ, ಮಗನ ಮದುವೆ ಕಾರ್ಯಕ್ರಮದ ಹೆಸರಿನಲ್ಲಿ ಮತದಾರರಿಗೆ ಉಡುಗೊರೆ ಕೊಟ್ಟು ತನ್ನತ್ತ ಸೆಳೆಯಬಹುದು. ಹಾಗಾಗಿ ಆ ಎರಡೂ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಬಿ.ಎಸ್. ಗೌಡ ಎಂಬುವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
‘ನ. 22ರಂದು ಗೃಹ ಪ್ರವೇಶ, ಡಿ. 1ರಂದು ನಗರದಲ್ಲಿ ಅದ್ದೂರಿ ಮದುವೆ ಹಮ್ಮಿಕೊಂಡಿದ್ದಾರೆ. ಮತದಾರರಿಗೆ ಆಮಿಷವೊಡ್ಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಆ ಎರಡೂ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ಕೂಡ ಆಯೋಗಕ್ಕೆ ಗುರುವಾರ ದೂರು ಕೊಟ್ಟಿದ್ದಾರೆ. ‘ಮಗನ ಮದುವೆ ಹೆಸರಿನಲ್ಲಿ 40ರಿಂದ 50 ಸಾವಿರ ಜನರಿಗೆ ಊಟ ಹಾಕಿಸಿದರೆ, ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಹಾಗಾಗಿ ಸರಳವಾಗಿ ವಿವಾಹ ನಡೆಸಲು ಅನುಮತಿ ಕೊಡಬೇಕು. ಬೇಕಾದರೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲಿ’ ಎಂದು ಅರಸ್ ಪ್ರತಿಕ್ರಿಯಿಸಿದ್ದಾರೆ.