ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿದ ರಾಜ್ಯ ಚುನಾವಣಾ ಆಯೋಗದ ನಡೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧರಿಸಿದೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ, ‘ಕೋವಿಡ್ ನೆಪ ಮುಂದಿಟ್ಟು ಚುನಾವಣೆ ಮುಂದೂಡಿರುವುದು ಸರಿಯಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಡಿಸಿದರು.
‘ಲಾಕ್ಡೌನ್ ನಿರ್ಬಂಧ ಸಡಿಲಿಸಲಾಗಿದ್ದು, ಬಸ್, ಕಾರು ಸೇರಿದಂತೆ ಎಲ್ಲ ವಾಹನಗಳು ಎಲ್ಲ ಓಡಾಡುತ್ತಿಲ್ಲವೇ. ಲಾಕ್ಡೌನ್ ಎಂದು ಏನಾದರೂ ಕಟ್ಟುನಿಟ್ಟು ಇದೆಯೇ. ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟು, ಚುನಾವಣೆ ನಡೆಸಲು ಮಾತ್ರ ಲಾಕ್ಡೌನ್ ನೆಪ ಹೇಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
‘ಗ್ರಾಮ ಪಂಚಾಯಿತಿಗಳಿಗೆ ಇಷ್ಟ ಬಂದಂತೆ ನಾಮನಿರ್ದೇಶನ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಪಂಚಾಯತ್ ರಾಜ್ ಕಾಯ್ದೆಯಲ್ಲೂ ಅವಕಾಶ ಇಲ್ಲ. ಹೀಗಿದ್ದರೂ ಚುನಾವಣೆ ಮುಂದೂಡಲಾಗಿದೆ. ಇದು ಸಂವಿಧಾನ ಮತ್ತು ಕಾನೂನುಬಾಹಿರ. ಇದನ್ನು ಪ್ರಶ್ನಿಸಿ ಶೀಘ್ರದಲ್ಲೇ ಕೋರ್ಟ್ ಮೆಟ್ಟಿಲೇರುತ್ತೇವೆ’ ಎಂದರು.
‘ಈ ಬಗ್ಗೆ ನಮ್ಮ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಕಾನೂನು ಹೋರಾಟ ಅಲ್ಲದೆ ಬೇರೆ ದಾರಿಯೇ ಇಲ್ಲ’ ಎಂದೂ ಅವರು ಹೇಳಿದರು.