ಕಲಬುರ್ಗಿ: ನಗರದ ಎಂಎಸ್ಕೆಮಿಲ್ ಬಡಾವಣೆಯ ನಿವಾಸಿಯಾಗಿದ್ದ 76 ವರ್ಷದ ವೃದ್ಧರೊಬ್ಬರು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತಡ ರಾತ್ರಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೋವಿಡ್ 19 ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಸೌದಿ ಅರೇಬಿಯಾದಿಂದ ಈಚೆಗಷ್ಟೇ ಬಂದಿದ್ದ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆಗೆ ವ್ಯವಸ್ಥೆಮಾಡಲಾಗಿತ್ತು. ಆದರೆ ವೈದ್ಯಕೀಯ ಸಲಹೆಯನ್ನು ಮೀರಿ, ಕುಟುಂಬದ ಸದಸ್ಯರುಹೈದರಾಬಾದ್ಗೆ ಕರೆದೊಯ್ದು, ಅಲ್ಲಿನಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಅಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಆರೋಗ್ಯದ ಬಗ್ಗೆ ಜನರು ಜಾಗೃತಿ ವಹಿಸಬೇಕು ಎಂದುಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಶಂಕಿತ ಕೊರೊನಾ ತಗುಲಿದ ವ್ಯಕ್ತಿಯ ಅಂತ್ಯಕ್ರಿಯೆ ನಡೆಯುವವರೆಗೂ ಉಸ್ತುವಾರಿ ವಹಿಸಿಕೊಳ್ಳಲು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಅವರನ್ನು ಉಸ್ತುವಾರಿಯನ್ನಾಗಿ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎ.ಜಬ್ಬಾರ್ ನೇಮಿಸಿದ್ದಾರೆ.
ಕಲಬುರ್ಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, #COVID19 ಶಂಕಿತರೇ ಹೊರತು ದೃಡಪಟ್ಟಿಲ್ಲ. ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ #CovidUpdate
— B Sriramulu (@sriramulubjp) March 11, 2020
ವದಂತಿಗೆ ಕಿವಿಗೊಡಬೇಡಿ: ಆರೋಗ್ಯ ಸಚಿವ
ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಡಲು ಕೋವಿಡ್ 19 ಕಾರಣ ಎಂದು ಈವರೆಗೆ ದೃಢಪಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಿಂದ ಗಾಬರಿಯಾಗಬೇಡಿ. ಈ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತೆ. ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಜನರು ಧೈರ್ಯವಾಗಿರಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಭೀತಿ ಹುಟ್ಟಿಸಬೇಡಿ: ಮಾಧ್ಯಮಗಳಿಗೆ ಸರ್ಕಾರ ಸೂಚನೆ
‘ಮೃತನ ಸಾವಿಗೆ ಕೋವಿಡ್ 19 ಕಾರಣ ಎಂಬ ಸಂಗತಿ ದೃಢಪಟ್ಟಿಲ್ಲ.ಕಫ ಪರೀಕ್ಷೆ ವರದಿ ಇನ್ನೂ ಬರಬೇಕಿದೆ. ಮಾಧ್ಯಮಗಳಲ್ಲಿ ವ್ಯಕ್ತಿಸಾವಿಗೆ ಕೋವಿಡ್ 19 ಕಾರಣ ಎಂಬ ವರದಿಗಳು ಪ್ರಸಾರವಾಗುತ್ತಿರುವುದನ್ನು ಗಮನಿಸಿದ ನಂತರ ಈ ಸ್ಪಷ್ಟನೆ ಕೊಡುತ್ತಿದ್ದೇನೆ. ಮಾಧ್ಯಮಗಳು ಜನರಲ್ಲಿ ಭೀತಿ ಹುಟ್ಟಿಸಬಾರದು. ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಕ್ಕೆ ಸಹಕರಿಸಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.