ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ದೂರವಾದ ಬೆಳೆ ವಿಮೆ

ಕೈಕೊಟ್ಟ ಮುಂಗಾರು, ಬಿತ್ತನೆ ಪ್ರಮಾಣ ಕುಸಿತ
Last Updated 26 ಜುಲೈ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಬೆಳೆದ ಬೆಳೆ ಪ್ರಾಕೃತಿಕ ವಿಕೋಪದಿಂದ ಹಾಳಾದರೆ ಪರಿಹಾರ ಒದಗಿಸುವ ಸಲುವಾಗಿ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ’ ಯೋಜನೆ ಜಾರಿಯಲ್ಲಿ ಇದ್ದರೂ ಅವರ ನೆರವಿಗೆ ಬಾರದಾಗಿದೆ.

ರಾಜ್ಯದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಕೈಕೊಟ್ಟಿದ್ದು ಬಿತ್ತನೆಯ ಪ್ರಮಾಣ ಕುಸಿತ ಕಂಡಿದೆ.

ಈವರೆಗೆ ಸುಮಾರು ಶೇ 30ರಷ್ಟು ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಲಾಗಿದ್ದು, ಪ್ರಮುಖವಾಗಿದ್ವಿದಳ ಧಾನ್ಯ, ಎಣ್ಣೆಕಾಳು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ರಾಗಿ, ಭತ್ತವನ್ನು ಹೊರತುಪಡಿಸಿ ಇತರ ಬೆಳೆಗಳ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು.

ಎಣ್ಣೆಕಾಳು, ದ್ವಿದಳ ಧಾನ್ಯ, ವಾಣಿಜ್ಯ ಬೆಳೆಗಳ ಬಿತ್ತನೆ ಸಮಯ ಮುಗಿದಿದ್ದು, ವಿಮೆ ಮಾಡಿಸಲು ರೈತರಿಗೆ ಸಾಧ್ಯವಾಗಿಲ್ಲ. ಬಿತ್ತನೆ ಮಾಡದೆ ವಿಮೆ ಎಲ್ಲಿಂದ ಮಾಡಿಸುವುದು ಎಂಬುದು ರೈತರ ಚಿಂತೆ. ಬಿತ್ತನೆ ಮಾಡಿದ ನಂತರ ಬೆಳೆ ನಷ್ಟವಾದರೆ ವಿಮೆ ಸೌಲಭ್ಯ ನೆರ
ವಿಗೆ ಬರಲಿದೆ. ವಿಮೆಯನ್ನೇ ಮಾಡಿಸದಿದ್ದರೆ ಯಾವ ನೆರವೂ ಸಿಗುವುದಿಲ್ಲ. ಹಾಗಾಗಿ ಬೆಳೆ ವಿಮೆ ಚಾಲ್ತಿಯಲ್ಲಿ ಇದ್ದರೂ ಕೃಷಿಕರು ಪರ್ಯಾಯ ನೆರವಿನತ್ತ ಕೈಚಾಚುವಂತಾಗಿದೆ.

ಬೆಳೆ ವಿಮೆಗೆ ನೋಂದಾಯಿಸಲು ಎಳ್ಳು, ಶೇಂಗಾ, ಅಲಸಂದೆ, ತೊಗರಿ, ಜೋಳ ಮೊದಲಾದ ಬೆಳೆಗಳಿಗೆ ಜೂನ್ 15 ಹಾಗೂ 2ನೇ ಹಂತದಲ್ಲಿ ಜುಲೈ 1ರ ವರೆಗೆ ಕೃಷಿ ಇಲಾಖೆ ಕಾಲಾವಕಾಶ ನೀಡಿತ್ತು.

ಉದ್ದು, ಹೆಸರು, ಸೋಯಾಬೀನ್‌ ನಂತಹ ಬೆಳೆಗಳಿಗೆ ಜುಲೈ 16ರ ವರೆಗೆ ಹಾಗೂ ರಾಗಿ, ಭತ್ತ ಇತರೆ ಬೆಳೆಗಳಿಗೆ ಆಗಸ್ಟ್ 14ರ ವರೆಗೂ ಸಮಯ ನೀಡಲಾಗಿದೆ. ರಾಗಿ, ಭತ್ತವನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಬೆಳೆಗಳ ಬಿತ್ತನೆ ಕಾಲ ಮುಗಿದಿದೆ. ಕೃಷಿ ಮಾಡುತ್ತಿದ್ದ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಭೂಮಿಯಲ್ಲಿ ಇನ್ನೂ ಉಳುಮೆಯೇ ನಡೆದಿಲ್ಲ. ಒಟ್ಟಾರೆ ಶೇ 70ರಷ್ಟು ಜಮೀನಿನಲ್ಲಿ ಇನ್ನೂ ಬಿತ್ತನೆಯಾಗಿಲ್ಲ.

ವಿಮೆಗೆ ಹಿನ್ನಡೆ: 2018–19ನೇ ಸಾಲಿನಲ್ಲಿ 12.22 ಲಕ್ಷ ರೈತರು ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದರೆ, 2019–20ನೇ ಸಾಲಿನಲ್ಲಿ ಈವರೆಗೆ 1.91 ಲಕ್ಷ ರೈತರು ವಿಮೆ ಮಾಡಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ 20ರಷ್ಟು ಮಂದಿ ಮಾತ್ರ ಬೆಳೆ ವಿಮೆ ಮಾಡಿಸಿದಂತಾಗಿದೆ. ಜುಲೈ ತಿಂಗಳ ಮಧ್ಯಭಾಗದವರೆಗೆ ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು 38 ಸಾವಿರ, ತುಮಕೂರು 30 ಸಾವಿರ, ಚಿತ್ರದುರ್ಗ 22 ಸಾವಿರ, ಹಾವೇರಿ ಜಿಲ್ಲೆ 10 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಉಳಿದ ಯಾವ ಜಿಲ್ಲೆಯಲ್ಲೂ ವಿಮೆ ಮಾಡಿಸಿದ ರೈತರ ಸಂಖ್ಯೆ 10 ಸಾವಿರ ದಾಟುವುದಿಲ್ಲ.

ತೀವ್ರ ಕಡಿಮೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 47, ಕೋಲಾರ 80, ಚಿಕ್ಕಬಳ್ಳಾಪುರ 302, ಯಾದಗಿರಿ 336, ರಾಮನಗರ 408 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಸಾಕಷ್ಟು ಜಿಲ್ಲೆಗಳಲ್ಲಿ ಈ ಪ್ರಮಾಣ ಮೂರಂಕಿ ದಾಟುವುದಿಲ್ಲ. ಈಗ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು, ಮತ್ತಷ್ಟು ಪ್ರದೇಶದಲ್ಲಿ ಬಿತ್ತನೆಯಾದರೆವಿಮೆ ಮಾಡಿಸುವ ರೈತರ ಸಂಖ್ಯೆಯೂ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT