ಯಾದಗಿರಿ: ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ (67) ಅವರು ಹೃದಯಾಘಾತದಿಂದ ಗುರುವಾರ ಬೆಂಗಳೂರಿನಲ್ಲಿ ನಿಧನರಾದರು.
ಅವರಿಗೆಪತ್ನಿ ದೇವಮ್ಮ, ಪುತ್ರರಾದ ನಾಗರಾಜ, ಶಿವರಾಜ ಇದ್ದಾರೆ.
ಗುರುವಾರ ಬೆಳಿಗ್ಗೆ 9.30ರ ಸುಮಾರಿಗೆ ಶಿಕ್ಷಣ ಸಚಿವ ಸುರೇಶಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಪುಸ್ತಕ ‘ಕಾಡು ಕನಸಿನ ಬೀಡಿಗೆ’ಯನ್ನು ನೀಡಿ ಲಾಡ್ಜ್ಗೆ ಮರಳಿದ್ದರು. ಅಲ್ಲಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದರು.
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಶಹಾಪುರದ ಬೀದರ್–ಶ್ರೀರಂಗಪಟ್ಟಣದ ಹೆದ್ದಾರಿಯ ವಿಭೂತಿಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಾವ್ಯ, ಕತೆ, ಕಾದಂಬರಿ, ಶಿಶುಪ್ರಾಸ, ಒಗಟು, ಪ್ರವಾಸ ಕಥನ ಸೇರಿ 50ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದಾರೆ.2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.