ಸಿರುಗುಪ್ಪ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇವದಾಸಿ ವಿಮೋಚನಾ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಧರಣಿ ನಡೆಸಲಾಯಿತು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಈರಮ್ಮ ಮಾತನಾಡಿ, ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ಕೂಡಲೆ ತಾಲ್ಲೂಕಿನ ಎಲ್ಲ ಗ್ರಾಮಗಳ ದೇವದಾಸಿ ಮಹಿಳೆ ಯರ ಸಂಪೂರ್ಣ ಗಣತಿ ಮಾಡಬೇಕು, ಮಾಸಿಕ ₹5 ಸಾವಿರ ಜೀವನ ನಿರ್ವಹಣಾ ಭತ್ಯೆ ನೀಡಬೇಕು ಎಂದರು.
5 ಎಕರೆ ಕೃಷಿ ಜಮೀನು, ₹5 ಲಕ್ಷ ವೆಚ್ಚದಲ್ಲಿ ಮನೆ ಹಾಗೂ ದೇವದಾಸಿ ಕುಟುಂಬದ ಮಕ್ಕಳ ಮದುವೆಗೆ ಸಮಾನವಾಗಿ ₹5 ಲಕ್ಷ ಪ್ರೋತ್ಸಾಹ ಧನ ನೀಡಬೇಕು. ಸ್ವ-ಉದ್ಯೋಗಕ್ಕಾಗಿ ಸಹಾಯಧನದೊಂದಿಗೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಿಪ್ಪಯ್ಯ, ಸುರೇಶ, ಲತೀಫ್ ಖಾಜಾ ಮತ್ತು ನೂರಾರು ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು.
ಸಂಡೂರು ವರದಿ: ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಾದ್ಯಂತ ತಾಲ್ಲೂಕು ಕಚೇರಿ ಮುಂದೆ ಸೆ. 16 ರಿಂದ 18 ರವರೆಗೆ ಅಹೋರಾತ್ರಿ ಧರಣಿ ನಡೆಸಲು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಂಘದ ಸಂಡೂರು ತಾಲ್ಲೂಕು ಸಮಿತಿ ಸದಸ್ಯರು ಸೋಮವಾರ ಸಂಡೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸಿದರು.
ಸಂಘದ ಮುಖಂಡರಾದ ಎ. ಸ್ವಾಮಿ, ವಿ. ದೇವಣ್ಣ, ಎಸ್. ಕಾಲುಬ, ಎಚ್. ದುರುಗಮ್ಮಾ ಅವರು ಸಂಘದ ಬೇಡಿಕೆಗಳಾದ ಎಲ್ಲಾ ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು ₹5 ಸಾವಿರಕ್ಕೆ ಹೆಚ್ಚಿಸುವುದು, ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಈ ಸೌಲಭ್ಯದ ವಿಸ್ತರಣೆ ಮುಂತಾದ ಬೇಡಿಕೆಗಳ ಕುರಿತು ಮಾತನಾಡಿದರು.
ಸಂಘದ ಸದಸ್ಯರಾದ ರೇಣುಕಮ್ಮ, ಗಂಗಮ್ಮ, ಹುಲಿಗೆಮ್ಮ, ಅಚಮ್ಮ, ಮೈಲಮ್ಮ, ಅಂಜಿನಮ್ಮ, ರುದ್ರಮ್ಮ ಉಪಸ್ಥಿತರಿದ್ದರು.