ಬೆಂಗಳೂರು: ‘ಬಿಜೆಪಿಯವರು ದಡ್ಡರು. ಅವರ ಬಳಿ 20 ಜನ ಕಾಂಗ್ರೆಸ್ ಶಾಸಕರು ಮಾತ್ರ ಅಲ್ಲ; ಕಾಂಗ್ರೆಸ್–ಜೆಡಿಎಸ್ನ ಎಲ್ಲ ಶಾಸಕರೂ ಅವರ ಜತೆ ವಿಶ್ವಾಸದಿಂದಲೇ ಇದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಛೇಡಿಸಿದರು.
‘ಮೇ 23ರಿಂದ ಬಳಿಕ ರಾಜ್ಯದಲ್ಲೂ ತಮ್ಮ ಪಕ್ಷದ ಸರ್ಕಾರ ಬರಲಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಎಲ್ಲ 78 ಶಾಸಕರೂ ಅವರ ಜತೆಗೇ ಇದ್ದೇವೆ. ವಿಧಾನಸಭೆಯಲ್ಲಿ ಒಟ್ಟಿಗೆಕುಳಿತು ಚರ್ಚೆ ಮಾಡುತ್ತೇವೆ’ ಎಂದರು.
‘ಸಂಸಾರ ಬೇರೆ, ರಾಜಕಾರಣ ಬೇರೆ. ನಾವು ರಾಜಕಾರಣವನ್ನು ಅವರೊಂದಿಗೆ ಮಾಡಲೇಬೇಕಲ್ಲ. ಸರ್ಕಾರ ಪತನಕ್ಕೆ ಗಂಟೆ, ಗಡುವು ಕೊಡುತ್ತಲೇ ಇದ್ದಾರೆ.ಕೊಡಲಿ ಬಿಡಿ. ಅವರ ಖುಷಿಗೆ ಅವರು ಮಾತನಾಡುತ್ತಿದ್ದಾರೆ. ನಾವು ಮುಹೂರ್ತ, ಗಳಿಗೆ ಇಡುವವರಲ್ಲ. ಬೇರೆಯವರ ರಾಜಕಾರಣ ನಮಗೆ ಏಕೆ’ ಎಂದು ಪ್ರಶ್ನಿಸಿದರು.
‘ಕಂಪ್ಲಿ ಶಾಸಕ ಗಣೇಶ್ ಬಹಳ ನೋವು ಅನುಭವಿಸಿದ್ದಾರೆ. ಮುಂದೆ ಅವರಿಗೆ ಕೆಟ್ಟ ಗಳಿಗೆ ಬಾರದಿರಲಿ. ಆನಂದ ಸಿಂಗ್ ಹಾಗೂ ಗಣೇಶ ಅವರಿಗೆ ಕೆಟ್ಟ ಗಳಿಗೆ ಬಂದಿತ್ತು. ಈಗ ಅದರಿಂದ ಹೊರಬಂದಿದ್ದಾರೆ’ ಎಂದೂ ಅವರು ಹೇಳಿದರು.