ಕಲಬುರ್ಗಿ: ‘ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000’ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಟ್ವೀಟ್ ಅನ್ನು ನಾನು ಸರಿಯಾಗಿ ಗಮನಿಸಿಲ್ಲ. ರಾಜೀವ್ ಗಾಂಧಿ ಬಗ್ಗೆ ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈಗ ಅವರ ಅನುಯಾಯಿಗಳು, ಸಂಸದರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಟೀಲ್ ಅವರು ನಾಲಿಗೆ ಉದ್ದ ಮಾಡಿ, ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ’ ಎಂದರು.
‘ಆಧುನಿಕ ಭಾರತಕ್ಕೆ ರಾಜೀವ್ ಗಾಂಧಿ ಕೊಡುಗೆ ಅಪಾರವಾಗಿದೆ. ಕಟೀಲ್ ಅವರು ಟ್ವೀಟ್ ಡಿಲೀಟ್ ಮಾಡಿದರೂ ಏನೂ ಬದಲಾಗುವುದಿಲ್ಲ. ಇದರಿಂದ ಅವರ ಮನಸ್ಥಿತಿ ಅರ್ಥವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.