ಬಳ್ಳಾರಿ:ಶಿವಮೊಗ್ಗದಲ್ಲಿ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಲು ಬಿಜೆಪಿ ರಾಜ್ಯ ಘಟಕದ ಬಿ.ಎಸ್.ಯಡಿಯೂರಪ್ಪ ಶ್ರಮಿಸುತ್ತಿರುವ ಸಂದರ್ಭದಲ್ಲೇ ಶಾಸಕ ಕೆ.ಎಸ್.ಈಶ್ವರಪ್ಪ, ರಾಘವೇಂದ್ರ ಸೋಲಿಗೆ ಹುನ್ನಾರ ನಡೆಸಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ದೂರಿದರು.
'ನಮ್ಮದು ಕುಟುಂಬ ರಾಜಕಾರಣ ಎನ್ನುವ ಯಡಿಯೂರಪ್ಪ, ರಾಘವೇಂದ್ರಬದಲಿಗೆ ಸಾಮಾನ್ಯ ಕಾರ್ಯಕರ್ತರೊಬ್ಬನ್ನು ಕಣಕ್ಕೆ ಇಳಿಸಬಹುದಾಗಿತ್ತಲ್ಲವೇ' ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದರು.
ರಾಜ್ಯ ಸರ್ಕಾರವನ್ನು ಬೀಳಿಸಲು ಯಡಿಯೂರಪ್ಪ ಕಂಡ ಕಂಡ ದೇವರಿಗೆ ಕೈಮುಗಿಯುತ್ತಿದ್ದಾರೆ. ಆದರೆ ಯಾವ ದೇವರೂ ಕಣ್ತೆರೆಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿ.ಎಸ್. ಯಡಿಯೂರಪ್ಪ ಹೇಳಿದ್ದ ಎಂಜಿನಿಯರುಗಳನ್ನೇ ಹುಬ್ಬಳ್ಳಿ, ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿರುವೆ. ಆದರೂ ಅವರು ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿರುವುದು ಸರಿಯಲ್ಲ ಎಂದರು.
ವರ್ಗಾವಣೆಗಾಗಿ ಯಡಿಯೂರಪ್ಪ ನನಗೆ ಎಷ್ಟು ದುಡ್ಡುಕೊಟ್ಟಿದ್ದಾರೆಂದು ಹೇಳಲಿ. ನಮಗೆ ಸೂಟ್ಕೇಸ್ ಬೇಕಾಗಿಲ್ಲ ಎಂದು ಕುಟುಕಿದರು.