ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಿರಾಶ್ರಿತರ ಮೇಲೆ ಹೆಚ್ಚಿನ ನಿಗಾ ವಹಿಸಿ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಸೂಚಿಸಿದರು.
ನಗರದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈ ಕೇಂದ್ರದಲ್ಲಿ 672 ನಿರಾಶ್ರಿತರಿದ್ದಾರೆ. ನಿರಾಶ್ರಿತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡುವುದಷ್ಟೇ ಅಲ್ಲದೇ ಅವರು ಬಳಸುವಂತೆ ಮನವರಿಕೆ ಮಾಡಿಕೊಡಬೇಕು. ಅಂತರ ಕಾಯ್ದುಕೊಳ್ಳಬೇಕು. ಮುಂಜಾಗ್ರತಾ ಕ್ರಮಕೈಗೊಂಡು ಮಾರ್ಚ್ 2ನೇ ವಾರದಿಂದಲೇ ಈ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಲಾಕ್ಡೌನ್ ಮಾಡಿ, ಪ್ರವೇಶವನ್ನು ನಿಷೇಧಿಸಿ, ಯಾರಿಗೂ ಹೊಸದಾಗಿ ದಾಖಲು ಮಾಡಿಕೊಂಡಿಲ್ಲ ಅಲ್ಲದೇ ಸಾರ್ವಜನಿಕರಿಗೂ ಪ್ರವೇಶ ನೀಡಿರುವುದಿಲ್ಲ. ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ಈ ಕೇಂದ್ರದಲ್ಲಿ ಯಾರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಎಂದರು.
ಈ ನಿರಾಶ್ರಿತರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವುದರೊಂದಿಗೆ ವಾರದಲ್ಲಿ 2 ದಿನ ಮೊಟ್ಟೆ, 4 ದಿನ ಹಣ್ಣು ನೀಡಲಾಗುತ್ತಿದೆ. ಕೇಂದ್ರದ ಆವರಣದಲ್ಲಿ ಪ್ರತ್ಯೇಕ ಆಸ್ಪತ್ರೆ ಇದ್ದು, ಇಬ್ಬರು ವೈದ್ಯರು ಹಾಗೂ 8 ನರ್ಸ್ಗಳಿದ್ದು, 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕ ಆಂಬ್ಯುಲೆನ್ಸ್ ಇದೆ. ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮ ಗುಣಮಟ್ಟದ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.
ಮಾನಸಿಕ ಅಸ್ವಸ್ಥತರ ತಪಾಸಣೆಗಾಗಿ ತಿಂಗಳಿಗೆ 3 ಬಾರಿ ಮನೋರೋಗ ತಜ್ಞರು ಭೇಟಿ ನೀಡುತ್ತಾರೆ. ವಾರಕ್ಕೊಮ್ಮೆ ದಂತ ತಪಾಸಣೆ ಮಾಡಿಸಲಾಗುತ್ತಿದೆ. ಬೆಳಿಗ್ಗೆ ಯೋಗಾಸನ ಮಾಡಿಸಲಾಗುತ್ತಿದೆ. ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ವಯಸ್ಕರ ಶಿಕ್ಷಣ ಪದ್ದತಿಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುತ್ತದೆ. ಸ್ವಚ್ಚತೆಯನ್ನು ಕಾಪಾಡಿ, ಪ್ರತಿದಿನ ಕುಡಿಯಲು ಶುದ್ದೀಕರಿಸಿದ ಬಿಸಿನೀರನ್ನು ಒದಗಿಸಲಾಗುತ್ತಿದೆ. ಕೇಂದ್ರದಲ್ಲಿ ಸ್ವಚ್ವತೆ, ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಕುರಿ ಸಾಗಣೆ, ಬಟ್ಟೆ ತೊಳೆಯುವುದನ್ನು ನಿರಾಶ್ರಿತರು ಸ್ವಯಂ ಪ್ರೇರಣೆಯಿಂದ ಕಾರ್ಯನಿರ್ಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುವವರಿಗೆ ದಿನಕ್ಕೆ ₹78ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮ ಮಾಡಲಾಗಿದೆ. ಟೈಲರಿಂಗ್, ಫಿನಾಯಿಲ್ ಸಿದ್ದಪಡಿಸಲಾಗುತ್ತದೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ತಿಸಿದರು.
ನಂತರ ಕೇಂದ್ರವು ನಿರ್ವಹಿಸುತ್ತಿರುವ ತೋಟಗಾರಿಕೆ, ಕೃಷಿ, ಟೈಲರಿಂಗ್ , ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರಾಶ್ರಿತರ ಪರಿಹಾರ ಕೇಂದ್ರದ ಕಾರ್ಯದರ್ಶಿ ಚಂದ್ರಾ ನಾಯ್ಕ್, ಕ್ರೈಸ್ನ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್, ವಿಶೇಷ ಕರ್ತವ್ಯಾಧಿಕಾರಿ ಆರ್.ಬಿ. ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.