ಶಿರಸಿ: ಕುಮಟಾದಿಂದ ಮಂಗಳವಾರ ರಾತ್ರಿ ಕಾಲ್ನಡಿಗೆ ಆರಂಭಿಸಿದ ನಾಲ್ವರು ಕಾರ್ಮಿಕರು ಬುಧವಾರ ಮಧ್ಯಾಹ್ನ ಶಿರಸಿಯಲ್ಲಿ ಕೆಲಹೊತ್ತು ತಂಗಿ, ಮತ್ತೆ ತವರಿನೆಡೆಗೆ ಹೆಜ್ಜೆ ಹಾಕಿದರು.
ಉದ್ಯೋಗ ಹುಡುಕಿಕೊಂಡು ನಾಲ್ಕು ತಿಂಗಳ ಹಿಂದೆ ಕುಮಟಾಕ್ಕೆ ಬಂದಿದ್ದ ಗದಗದ ರವಿ ಕುಂಕದ್, ಮಲ್ಲಪ್ಪ, ಬಸಪ್ಪ, ಶಾಂತಪ್ಪ ಅವರು, ಚಿರೆಕಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಪರಿಣಾಮವಾಗಿ ಅವರು ಕೈಗೆ ಕೆಲಸವಿಲ್ಲದೇ, ಒಂದು ವಾರ ಕುಮಟಾದಲ್ಲೇ ಕಳೆದರು.
‘ಊರಿಗೆ ಹೋಗಲು ಗಾಡಿ ಸಿಗುವುದೆಂದು ಒಂದು ವಾರ ಕಾದೆವು. ಒಂದು ಗಾಡಿಯೂ ಸಿಗಲಿಲ್ಲ. ದುಡಿದ ದುಡ್ಡೂ ಖಾಲಿ ಆಯಿತು. ಹೀಗಾಗಿ, ನಡೆಯುತ್ತಲೇ ಊರಿಗೆ ಹೊರಟಿದ್ದೇವೆ. ರಾತ್ರಿಯಿಂದ ಬೆಳಗಿನವರೆಗೆ ನಡೆದು ಶಿರಸಿ ತಲುಪಿದ್ದೇವೆ. ಊರು ತಲುಪಲು ಇನ್ನೂ ಒಂದು ದಿನವಾಗಬಹುದು. ಇನ್ನು ಕೆಲಸಕ್ಕಾಗಿ ಈ ಕಡೆ ತಿರುಗಿ ನೋಡುವುದಿಲ್ಲ’ ಎಂದು ರವಿ ಹೇಳಿದರು.
‘ಗದಗದಲ್ಲಿ ಕೆಲಸ ಸಿಕ್ಕಿರಲಿಲ್ಲ. ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದೆವು. ನಮ್ಮ ಕುಟುಂಬ ಊರಿನಲ್ಲೇ ಇದೆ. ನಾಲ್ಕು ತಿಂಗಳ ಹಿಂದೆ ಕುಮಟಾದಲ್ಲಿ ಕೆಲಸ ಸಿಕ್ಕಿತ್ತು. 10 ದಿನಗಳ ಹಿಂದೆ ಒಮ್ಮೆ ಊರಿಗೆ ಹೋಗಿ ಮತ್ತೆ ಬಂದಿದ್ದೆವು. ಬರುವಷ್ಟರಲ್ಲಿ ಕೆಲಸವೂ ಕೈತಪ್ಪಿ ಹೋಯಿತು’ ಎಂದು ಮಲ್ಲಪ್ಪ ಹೇಳಿದರು.