ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಚಾರ್ಜ್‌ಶೀಟ್: ಆರೋಪಗಳ ಸುರಿಮಳೆ ಗೈದ ಎಚ್‌ಡಿಕೆ

Last Updated 4 ಡಿಸೆಂಬರ್ 2019, 13:37 IST
ಅಕ್ಷರ ಗಾತ್ರ

ಉಪಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನರ್ಹ ಶಾಸಕರು ಮತ್ತು ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ತೀವ್ರವಾಗಿ ಹರಿಹಾಯುವಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಆರೋಪ ಪಟ್ಟಿಯ ಪತ್ರಿಕಾ ಪ್ರಕಟಣೆ ಹೀಗಿದೆ...

ನನ್ನ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಕೂಡಲೇ ಅತೃಪ್ತಗೊಂಡಿದ್ದ ಬಿಜೆಪಿ, ಅಧಿಕಾರದ ಹುಚ್ಚು ಹಿಡಿಸಿಕೊಂಡು ಕೂಗುಮಾರಿಯಾಂತಾಗಿತ್ತು. ನಾನು ಮಾಡದ ತಪ್ಪುಗಳಿಗೆ ನನ್ನನ್ನು ಬಿಗಿಯುತ್ತಾ, ಆಡಳಿತ ಮಾಡಲು ಬಿಡದ ಬಿಜೆಪಿ ಅನರ್ಹರ ಅಕ್ರಮ ಸಂಬಂಧದೊಂದಿಗೆ ಅನೈತಿಕ ಸರ್ಕಾರ ರಚಿಸಿ ಈಗ ರಾಜ್ಯವನ್ನು ಅನಾಹುತದ ಹಾದಿಯಲ್ಲಿ ಕರೆದೊಯ್ಯುತ್ತಿದೆ. ಈ ಮೂಲಕ ದೇಶದಲ್ಲೆ ಕೆಟ್ಟ ಸಂಪ್ರದಾಯವೊಂದಕ್ಕೆ ರಾಜ್ಯ ಮಾದರಿಯಾಗುತ್ತಿದೆ.

ಬಿಜೆಪಿ ಮತ್ತು ಅನರ್ಹರ ವಿರುದ್ಧದ ನನ್ನ ಆರೋಪ ಪಟ್ಟಿ ಇದು.

1. ಯಾರಿಗಿತ್ತು ಸಂಖ್ಯೆ?

ವಿಧಾನಸಭೆ ಫಲಿತಾಂಶ ಬಂದಾಗ ಯಾರಿಗೂ ಸಂಖ್ಯೆ ಇರಲಿಲ್ಲ. ಮೈತ್ರಿಯಾದಾಗ ಸಂಖ್ಯೆ ಇದ್ದದ್ದು ಜೆಡಿಎಸ್ ಕಾಂಗ್ರೆಸ್‌ಗೆ. ಅದರಂತೆ ರಚನೆಯಾದ ಸರ್ಕಾರವನ್ನು ಐದು ವರ್ಷ ನಡೆಯಲು ಬಿಡದ ಯಡಿಯೂರಪ್ಪ ಅವರದ್ದು ಅಧಿಕಾರ ಲಾಲಸೆಯಾಗಿರಲಿಲ್ಲವೇ? ಯಾಕಿಷ್ಟು ಅಧಿಕಾರದ ಆಸೆ? ರಾಜ್ಯದ ಉದ್ಧಾರಕ್ಕೋ ನಿಮ್ಮ ಉದ್ಧಾರಕ್ಕೋ? ರಾಜ್ಯದ ಉದ್ಧಾರಕ್ಕಾಗಿ ಆಗಿದ್ದರೆ ಎಲ್ಲಾಗಿದೆ ಕರ್ನಾಟಕದ ಉದ್ಧಾರ?

2. ನಿಮ್ಮದು ಸಾಂವಿಧಾನ ಬದ್ಧ ಸರ್ಕಾರವೇ?

ಕೇವಲ ಅಧಿಕಾರಕ್ಕಾಗಿ ಶಾಸಕರನ್ನು ಖರೀದಿಸಿದ ಬಿಎಸ್‌ವೈ, ಬಿಜೆಪಿ ಮುಂದಿನ ಪೀಳಿಗೆಗೆ ತಿಳಿಸಿದ ಸಂದೇಶವೇನು? ಸರ್ಕಾರ ರಚಿಸಲು ಅಸಾಂವಿಧಾನಿಕ ಹಾದಿ ತೋರಿಸಿಕೊಟ್ಟ ಬಿಜೆಪಿಗೆ ಇದು ಭವಿಷ್ಯದಲ್ಲಿ ಉರುಳಾಗದೇ? ಇನ್ನೊಂದು ಪಕ್ಷದ ಶಾಸಕರ ಮೇಲೆ ಕಣ್ಣು ಹಾಕುವುದು ಪರರ ಹಣಕ್ಕೆ, ಪರ ಸ್ತ್ರೀಯರ ಮೇಲೆ ಕಣ್ಣು ಹಾಕಿದಂತೆ ಅಲ್ಲವೇ. ಹೀಗಾಗಿ ಅಸಾಂವಿಧಾನಿಕವಾದ ಈ ಸರ್ಕಾರ ಅನೈತಿಕವೂ ಕೂಡ. ರಾಜಕೀಯ ವ್ಯಭಿಚಾರವೂ ಕೂಡ.

3. ಆಪರೇಷನ್‌ಗೆ ಒಂದಾಣೆ ಖರ್ಚು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳಿ

ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು, ಬಿಎಸ್‌ಪಿ ಆಣತಿ ಮೀರಿ ಮಾಯಾವತಿ ಅವರಿಗೆ ದ್ರೋಹ ಬಗೆದವರನ್ನು, ಪಕ್ಷೇತರರನ್ನು ಬಿಜೆಪಿ ಅಕ್ಷರಶಃ ಖರೀದಿಸಿದೆ. ಇದಕ್ಕೆ ಒಂದಾಣೆ ಖರ್ಚು ಮಾಡಿಲ್ಲವೆಂದು ಬಿಎಸ್‌ವೈ ಜನತೆಯ ಎದುರು ಬಂದು ಪ್ರಮಾಣ ಮಾಡುವರೇ? ಬಿಎಸ್‌ವೈ ಪ್ರಮಾಣ ಮಾಡುವ ದಿನ ನಾನೂ ಜನರ ಎದುರು ಬಂದು ನಿಲ್ಲುತ್ತೇನೆ. ಜನರ ಎದುರು ಪ್ರಮಾಣ ಮಾಡುವ ಶಕ್ತಿ ನಿಮಗೆ ಇದೆಯೇ ಯಡಿಯೂರಪ್ಪನವರೇ?

4. ಹಠದ ಸರ್ಕಾರದ ಒಂದೇ ಒಂದು ಸಾಧನೆ ತಿಳಿಸಬಹುದೇ?

ಅನರ್ಹರ ಬೆಂಬಲದ ಅನೈತಿಕ ಸರ್ಕಾರ ಈವರೆಗೆ ಮಾಡಿದ ಸಾಧನೆ ಏನು? ನೆರೆ ಪೀಡಿತರನ್ನು ಗೋಳಾಡಿಸಿದ್ದು. ದ್ವೇಷದ ರಾಜಕರಾಣ ಮಾಡಿದ್ದು. ಹಿಂದಿನ ಸರ್ಕಾರದ ಜನಪರ ಯೋಜನೆಗಳಿಗೆ ಕಲ್ಲು ಹಾಕಿದ್ದು. ಜಾತಿ ರಾಜಕಾರಣ ಮಾಡಿದ್ದು. ಅನಗತ್ಯ ಚುನಾವಣೆ ತಂದಿದ್ದು. ಮಕ್ಕಳ ಮೂಲಕ ಕಮೀಷನ್ ದಂಧೆ ಮಾಡಿದ್ದು. ಮಾಧ್ಯಮಗಳ ಕತ್ತು ಹಿಸುಕಿದ್ದು... ಇಷ್ಟೇ ಅಲ್ಲವೇ? ನಾನು ನೀಡಿದ ಸಾಲಮನ್ನಾದಂಥಹ, ಬಡವರ ಬಂಧುವಿನಂಥ ಒಂದು ಕಾರ್ಯಕ್ರಮ ನೀಡಲು ನಿಮಗೆ ಸಾಧ್ಯವೇ? ರೈತರ ಪರ ಎಂದ ಬಿಜೆಪಿ ಸರ್ಕಾರ ಇಂದು ರೈತರನ್ನು ಬೀದಿಗೆ ತಳ್ಳಿಲ್ಲವೇ? ಬರ ಪರಿಹಾರ, ಸೂರು ನೀಡದೇ ಕಾಡುತ್ತಿಲ್ಲವೇ? ಅನರ್ಹರಿಂದ ನನ್ನ ಸರ್ಕಾರ ಬಂದಿದೆ. ಅವರಿಗಾಗಿ ಎಷ್ಟು ಬೇಕಾದರೂ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿ ಜನರಿಂದ ಸರ್ಕಾರ ಬಂತು ಎಂದು ಎಲ್ಲಿಯೂ ಹೇಳುವುದಿಲ್ಲ. ಜನರಿಗಾಗಿ ಏನು ಬೇಕಾದರೂ ಮಾಡುತ್ತೇನೆಂದು ಒಂದು ಮಾತು ಹೇಳುವುದಿಲ್ಲ‌. ಇದೇ ಇವರ ಸಾಧನೆ.

5. ಬಿಜೆಪಿ ಸರ್ಕಾರ ರಚಿಸಲು ಮೋದಿ, ಶಾ ಒಪ್ಪಿದ್ದರೇ?

ಅಧಿಕಾರದ ಮೋಹಕ್ಕೆ ಸಿಲುಕಿದ್ದ ಬಿಎಸ್‌ವೈ ಶತಾಯಗತಾಯ ನನ್ನ ಸರ್ಕಾರ ಬೀಳಿಸಲು ನಿಂತಿದ್ದರು. ಹಲವು ಸಲ ಪ್ರಯತ್ನಿಸಿದ್ದರು. ಆದರೆ ಇದಕ್ಕೆಲ್ಲ ಮೋದಿ, ಶಾ ಅನುಮತಿ ಇರಲಿಲ್ಲ. ಸರ್ಕಾರ ಕೆಡವಿ ಹೊಸ ಸರ್ಕಾರ ರಚಿಸಿದಾಗ ಅವರು ಶುಭವನ್ನೂ ಹಾರೈಸಲಿಲ್ಲ. ಅಕ್ರಮದ ಮೂಲಕ ಬಂದ ಸರ್ಕಾರವನ್ನು ಬೆಂಬಲಿಸುವುದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಬಿಎಸ್‌ವೈಗೆ ಮೂರು ಮೂಗುಧಾರಗಳನ್ನು ಹಾಕಿದ್ದಾರೆ. ಅಕ್ರಮದ ಮೂಲಕ ಬಿಎಸ್‌ವೈ ಅವರು ಮೋದಿ, ಶಾ ಮುಖಕ್ಕೆ ಮಸಿ ಬಳಿದಿದ್ದಾರೆ. ಇದು ಬಯಲಾಗದೇ ಉಳಿದಿದ್ದ ಸತ್ಯ.

6. ಜಾತಿವಾದಿಗಳಲ್ಲವೇ ನೀವು?

ಬಿಜೆಪಿಯ ಪಾಪ ಕಾರ್ಯಕ್ಕೆ ಎದುರಾದ ಈ ಉಪಚುನಾವಣೆಯನ್ನು ಬಿಎಸ್‌ವೈ ಜಾತಿವಾದದ ಮೂಲಕ ಎದುರಿಸುತ್ತಿದ್ದಾರೆ. ಜಾತಿ ಆಧಾರದಲ್ಲೇ ಮತ ಕೇಳುತ್ತಿದ್ದಾರೆ. ನೆನಪಿಡಿ ಲಿಂಗಾಯತ ಸಮುದಾಯ ನಿಮ್ಮ ಕಿಸೆಯಲ್ಲಿಲ್ಲ. ನೀವೊಬ್ಬರೇ ಸಮಾಜದ ನಾಯಕರೇನಲ್ಲ. ಲಿಂಗಾಯತ ಸಮುದಾಯದಿಂದ ಬಂದ ಹಲವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಅವರ್ಯಾರೂ ಜಾತಿ ರಾಜಕಾರಣ ಮಾಡಲಿಲ್ಲ. ಜಾತಿ ರಾಜಕಾರಣದ ಮೂಲಕ ನೀವು ಒಂದು ಸಮುದಾಯದ ಸ್ವಾಭೀಮಾನವನ್ನೇ ಹರಣ ಮಾಡುತ್ತಿದ್ದೀರಿ ನೆನಪಿರಲಿ.

7. ರಾಕ್ಷಸರು ಯಾರಾಗಿದ್ದರು?

ರಾಜಕೀಯದ ಶರಶಯ್ಯೆಯಲ್ಲಿದ್ದವರೊಬ್ಬರನ್ನು ನಾನು ಮುತುವರ್ಜಿ ಇಟ್ಟು, ರಾಜಕೀಯ ವಿರೋಧಗಳನ್ನು ಲೆಕ್ಕಿಸದೇ ತನು–ಮನ–ಧನ ಅರ್ಪಿಸಿ ಗೆಲ್ಲಿಸಿಕೊಂಡು ಬಂದೆ. ಅವರಿಗಾಗಿ ಚುನಾವಣೆ ಕಣದಲ್ಲಿ ದುಡಿದೆ. ಆದರೆ ಅವರ ನಿಷ್ಠೆ ಹಣಕ್ಕೆ ಮಾರಾಟವಾಯ್ತು‌. ದೇವರಾಜ ಅರಸು ನನ್ನ ಗುರು ಎನ್ನಿತ್ತಿದ್ದವರು ಈಗ ಹಣಕ್ಕೆ ಗುಲಾಮರಾಗಿದ್ದಾರೆ. ಅವರ ಲೋಲುಪತೆಗಳು ಬಟಾಬಯಲಾಗಿವೆ. ಇಂಥವರು ನನ್ನ ಸರ್ಕಾರವನ್ನು ರಾಕ್ಷಸ ಸರ್ಕಾರ ಎಂದರು. ಎಂಥ ರಾಕ್ಷಸ ವ್ಯಕ್ತಿತ್ವ ಇವರದ್ದು. ಇಳಿವಯಸ್ಸಿನ ಇವರ ಚೆಲ್ಲಾಟಗಳಿಗೆ ದುಡ್ಡು ಕೊಡದ್ದಕ್ಕೆ ನನ್ನದು ರಾಕ್ಷಸ ಸರ್ಕಾರವಾಯಿತಲ್ಲ. ಯಾರು ರಾಕ್ಷಸರು? ಅವರ ಭೋಗಗಳಿಗೆ ಸ್ಪಂದಿಸಿದ್ದರೆ ನಾನು ದೇವರಾಗುತ್ತಿದ್ದೆನೇನೋ?

8. ಹಾವಿಗೆ ಹಾಲೆರೆದಂತೆ

ಕೆ.ಆರ್ ಪೇಟೆಯ ಅನರ್ಹ ವೃತ್ತಿಯಿಂದ ವ್ಯಾಪಾರಿ . ಆತನಿಗೆ ಎರಡು ಬಾರಿಯೂ ಟಿಕೆಟ್ ನೀಡಲು ವಿರೋಧವಿತ್ತು. ಟಿಕೆಟ್ ಪಡೆದು ಗೆದ್ದ ಆತ ಈಗ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದಾರೆ. ದೇವೇಗೌಡರಿಂದ ಜೀವದಾನ ಪಡೆದ ಮಹಾಲಕ್ಷ್ಮೀ ಬಡಾವಣೆಯ ಅನರ್ಹ ಇಂದು ದೇವೇಗೌಡರ ಕಣ್ಣಲ್ಲಿ ನೀರು ತರಿಸಿದ್ದಾರೆ. ಎಂಥವರಿಗೆ ಸಹಾಯ ಮಾಡಿದೆವು ನಾವು? ಹಾವಿಗೆ ಹಾಲೆರೆದಂತಾಯ್ತೆ ನಮ್ಮ ನೆರವು. ದೇವೇಗೌಡರ ಮನದ ನೋವು ಇವರನ್ನು ಸುಮ್ಮನೆ ಬಿಟ್ಟೀತೆ?

9. ಮಂಡ್ಯ ಜನರ ಎದುರು ನಿಲ್ಲಲು ಬಿಎಸ್‌ವೈಗೆ ನಾಚಿಕೆಯಾಗದೇ?

ಈಗ ಚುನಾವಣೆ ಉದ್ದೇಶಕ್ಕೆ ಕೆ.ಆರ್ ಪೇಟೆ ನನ್ನ ಜನ್ಮ ಭೂಮಿ, ಕರ್ಮ ಭೂಮಿ ಎನ್ನುತ್ತಿರುವ ಬಿಎಸ್‌ವೈ, ಅವರ ಜೀವತಾವಧಿಯಲ್ಲಿ ಒಂದು ಭಾರಿಯೂ ಮಂಡ್ಯವನ್ನು ಗೌರವವಾಗಿ ಕಾಣಲಿಲ್ಲ. ಬಜೆಟ್‌ಗಳಲ್ಲಿ ಹಣ ಕೊಡಲಿಲ್ಲ. ಹಣ ಕೊಟ್ಟ ನನ್ನನ್ನು ಮಂಡ್ಯದ ಸಿಎಂ ಎಂದರು. ಈ ಮೂಲಕ ಮಂಡ್ಯದವರನ್ನು ಮೂರನೇ ದರ್ಜೆಯವರನ್ನಾಗಿ ಕಂಡರು. ಮಂಡ್ಯ ಲೋಕಸಭೆಯನ್ನು ರಣಾಂಗಣದಲ್ಲಿ ಗೆಲ್ಲಲಾಗದೇ ಪರದೆ ಹಿಂದೆ ನಿಂತು ಗೆದ್ದರು. ಹೀಗಿರುವ ಬಿಎಸ್‌ವೈ ಅದ್ಯಾವ ಆಧಾರದಲ್ಲಿ ಮಂಡ್ಯ ಜನರ ಎದುರು ನಿಂತಿದ್ದಾರೆ? ಹುಟ್ಟೂರಿಗೆ ದ್ರೋಹ ಬಗೆದ ನೀವು ಇಂದು ರಾಜಕೀಯಕ್ಕೆ ಬಂದರೆ ಜನ ಮೆಚ್ಚುತ್ತಾರೆಯೇ?

10. ಎಸ್.ಎಂ ಕೃಷ್ಣರದ್ದು ಧರ್ಮ ಕಾರ್ಯವೋ?

ಮೈತ್ರಿ ಸರ್ಕಾರ ಬೀಳಿಸಲು ನನ್ನದೂ ಪಾತ್ರವಿದೆ ಎಂದಿದ್ದಾರೆ ಎಸ್.ಎಂ. ಕೃಷ್ಣ. ದೇವೇಗೌಡರ ವಿರುದ್ಧ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿಅಭ್ಯರ್ಥಿಯನ್ನು ಹಾಕಿ ತಪ್ಪು ಮಾಡಿದೆ ಎಂದು ಕಾರ್ಯಕ್ರಮವೊಂದರಲ್ಲಿ ಇದೇ ಕೃಷ್ಣ ಹೇಳಿದ್ದರು. ಅಂದಿನಿಂದ ಅವರ ಮೇಲಿದ್ದ ಗೌರವ ಭಾವನೆ ಇಮ್ಮಡಿಯಾಗಿತ್ತು. ಅವರನ್ನು ನನ್ನ ತಂದೆ ಸಮಾನರನ್ನಾಗಿ ನಾನು ನೋಡುತ್ತಿದೆ. ಆದರೆ ಅವರ ಈಗಿನ ಮಾತು ಬಹಳ ನೋವು ತಂದಿದೆ. ಎಂಥವರನ್ನು ಹೇಗೆ ಮಾಡಿತು ಬಿಜೆಪಿ. ಇದೇ ಕೃಷ್ಣ ಅವರು ಒಂದು ಬಾರಿ ರಾಜ್ಯಸಭೆಗೆ ಹೋಗಲು ಕಷ್ಟ ಪಡುತ್ತಿದ್ದಾಗ ದೇವೇಗೌಡರು ಬೆಂಬಲ ನೀಡಿದ್ದರು. ಅಂದು ಅವರು ಆಯ್ಕೆಯಾಗದೇ ಹೋಗಿದ್ದರೆ ಅವರ ರಾಜಕೀಯ ಭವಿಷ್ಯವೇ ಮಸುಕಾಗುತ್ತಿತ್ತಲ್ಲವೇ? ಹಾಗೆ ನೋಡಿದರೆ ಕೃಷ್ಣ ಅವರಿಗೆ ಬಿಜೆಪಿ ಏನನ್ನೂ ನೀಡಿಲ್ಲ. ಅವರಂಥ ದೊಡ್ಡ ನಾಯಕನನ್ನು ಬಿಜೆಪಿ ಮನೆಯಲ್ಲಿ ಕೂರಿಸಿದೆ. ಇಂಥ ಪಕ್ಷದ ಪರವಾಗಿ ನಿಂತು ಒಂದು ಕಾಲದಲ್ಲಿ ನೆರವಾಗಿದ್ದ ನಮಗೆ ಚೂರಿ ಇರಿದರಲ್ಲ ಕೃಷ್ಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT