ತುಮಕೂರು:ಮುಂಬರುವ ಬಜೆಟ್ನಲ್ಲಿ ಶಿವಕುಮಾರ ಸ್ವಾಮಿ ಅವರ ಹೆಸರಿನಲ್ಲಿ ಏನಾದರೊಂದು ಕಾರ್ಯಕ್ರಮ ಘೋಷಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹೇಳಿದರು.
ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಘೋಷಣೆ ಮಾಡುವ ವಿಶ್ವಾಸವಿದೆ ಎಂದರು.
ಜ. 31ರಂದು ನಡೆಯುವ ಸ್ವಾಮೀಜಿ ಅವರ ಪಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಸರ್ಕಾರ ಮಾಡುತ್ತಿದೆ. ಈಗಾಗಲೇ ಅಧಿಕಾರಿಗಳು ಕಿರಿಯಶ್ರೀಗಳ ಸಲಹೆಯಂತೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
‘ನಾಡಿನ ಇತಿಹಾಸದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರ ಹಾಗೂ ಸಾಮಾಜಿಕ ಬದುಕಿನಲ್ಲಿ ಇಂತಹ ಮತ್ತೊಬ್ಬ ಶ್ರೀಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಅವರ ಕಾಲಘಟ್ಟದಲ್ಲಿ ನಾವೆಲ್ಲ ಬದುಕಿದ್ದೆವು ಎಂಬುದೇ ನಮ್ಮ ಅದೃಷ್ಟ’ ಎಂದರು.
‘ಶ್ರೀಗಳ ಜನಸಮುದಾಯಕ್ಕೆ ಕೊಟ್ಟ ಕೊಡುಗೆ ಲಕ್ಷಾಂತರ ಕುಟುಂಬಗಳ ಬದುಕಿನ ದೀಪ ಬೆಳಗಿಸಿದೆ.ಈ ದೇಶ, ಈ ಸಮಾಜ ಅವರನ್ನು ದೈವಿ ಪುರುಷರಾಗಿ ಮುಂದಿನ ದಿನಗಳಲ್ಲಿ ನೆನಪಿಸಿಕೊಳ್ಳುತ್ತದೆ’ ಎಂದರು.
ಕಿರಿಯಶ್ರೀಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಇನ್ನೂ ಹೆಚ್ಚಿನ ರೀತಿ ಮಠವನ್ನು ಬೆಳೆಸಬೇಕಾಗುತ್ತದೆ. ಅವರ ಹಿಂದೆ ನಾವೆಲ್ಲ ಇದ್ದೇವೆ ಎಂದು ನುಡಿದರು.
ಸ್ವಾಮೀಜಿ ಲಿಂಗೈಕ್ಯರಾದ ದಿನ ಮತ್ತು ಅಂತಿಮ ದರ್ಶನ ದಿನ ನಾಡಿನ ಭಕ್ತರು ದರ್ಶನಕ್ಕೆ ಬಂದು ಸಂಯಮದಿಂದ ಗೌರವ ಸಮರ್ಪಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದರು.