ಬೆಂಗಳೂರು: ಸಚಿವ ಎಚ್. ಡಿ. ರೇವಣ್ಣ ವಿರುದ್ಧ ಹಾಸನ ಜಿಲ್ಲಾ ಕೈ ಮುಖಂಡರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಹಾಸನ ಕಾಂಗ್ರೆಸ್ ಮುಖಂಡರು ತಮ್ಮ ಅಹವಾಲು ತೋಡಿಕೊಂಡಿದ್ದಾರೆ.
'ನೀವು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಎಂದು ಹೇಳುತ್ತೀರಾ. ಆದರೆ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಇದು ನಿಮಗೂ ಗೊತ್ತಿಲ್ಲದೇ ಏನಿಲ್ಲ’
ರೇವಣ್ಣ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲ ಅಧಿಕಾರಿಗಳು ಅವರು ಹೇಳಿದಂತೆ ಕೇಳುತ್ತಾರೆ. ನಮ್ಮ ಯಾವುದೇ ಕೆಲಸಗಳು ಆಗುವುದಿಲ್ಲ. ಸಣ್ಣ ಪುಟ್ಟ ಜಗಳಕ್ಕೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಾರೆ.ಅಲ್ಲಿ ಜೆಡಿಎಸ್ ಕಾರ್ಯಕರ್ತರದ್ದೇ ದರ್ಬಾರು' ಎಂದು ದೂರಿದ್ದಾರೆ.
‘ಇಲ್ಲೇನು ನಾವೆಲ್ಲ ಸರಿ ಮಾಡ್ತೇವೆ ಅಂತ ಜೆಡಿಎಸ್ ನವರು ಹೇಳುತ್ತಾರೆ. ಆದರೆ ಅಲ್ಲಿ ನಮ್ಮ ಮೇಲೆ ಪ್ರತಿದಿನ ಸವಾರಿ ಮಾಡುತ್ತಾರೆ. ಹೀಗಾದರೆ, ನಾವು ಅಲ್ಲಿ ಕೆಲಸ ಮಾಡುವುದು ಹೇಗೆ. ನಮ್ಮ ಮಾತು ನಡೆಯುವುದೇ ಇಲ್ಲ’ಎಂದು ಸಿದ್ದರಾಮಯ್ಯ ಬಳಿ ಗೋಳು ತೋಡಿಕೊಂಡಿದ್ದಾರೆ.
ಎಂಎಲ್ ಸಿ ಸಿದ್ದರಾಜು, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಗಂಡಸಿ ಶಿವರಾಂ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ತಾಲೂಕು ಅಧ್ಯಕ್ಷರು, ವಿವಿಧ ಘಟಕಗಳ ಮುಖಂಡರು ಇದ್ದರು.