ರಾಮನಗರ: ‘ವಿಶೇಷ ಸ್ಥಾನಮಾನ ರದ್ದು ಮಾಡುವುದರಿಂದ ಕಾಶ್ಮೀರಕ್ಕೆ ಒಳ್ಳೆಯದಾಗುವುದಾದರೆ ಯಾವುದೇ ತೊಂದರೆ ಇಲ್ಲ. ಅದರಿಂದಾದರೂ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ನಮ್ಮ ಸರ್ಕಾರದ ವಿರುದ್ಧ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದರು. ಈಗ ಅವರು ಮಾಡುತ್ತಿರುವುದು ಏನು ಎಂದು ಮಾಧ್ಯಮಗಳು ಪ್ರಶ್ನಿಸಬೇಕು’ ಎಂದರು.
‘ಋಣ ಮುಕ್ತ ಕಾಯ್ದೆಯು ಬಡವರ ಪರವಾಗಿದೆ. ಅದನ್ನು ಜಾರಿಗೊಳಿಸಿ ಎಂದು ಯಡಿಯೂರಪ್ಪನವರಿಗೆ ವಿಧಾನಸಭೆಯಲ್ಲಿ ಹೇಳಿದ್ದೇನೆ. ಅವರು ಬಡವರ ಪರವಾಗಿ ಇದ್ದಾರೋ ಇಲ್ಲವೋ ಎಂಬುದನ್ನು ಕಾದುನೋಡೋಣ’ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣದುದ್ದಕ್ಕೂ ದೃಶ್ಯ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ ‘ನನ್ನನ್ನು ಹಾಳು ಮಾಡುವುದರಿಂದ ನಿಮಗೇನು ಲಾಭ’ ಎಂದು ಪ್ರಶ್ನಿಸಿದರು.