ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಚಿತ್ರದುರ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಅಲ್ಲಲ್ಲಿ ಮರ ಬಿದ್ದು, ವಿದ್ಯುತ್ ಕಂಬಗಳು ಉರುಳಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.
ಹಿರಿಯೂರಿನಲ್ಲಿ ಆಲಿಕಲ್ಲು ಸಮೇತ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿ, ಗುಡುಗು–ಸಿಡಿಲು ಸಹಿತ ಮಳೆ ಸುರಿದಿದೆ. ವಿವಿಧೆಡೆ ಮರಗಳು ಬಿದ್ದಿದ್ದು, ವಿದ್ಯುತ್ ಕಂಬ, ತಂತಿ, ಮನೆ ಹಾಗೂ ಕೃಷಿಗೆ ಹಾನಿಯಾಗಿದೆ.
ಪುತ್ತೂರು ಹಾಗೂ ಕಡಬ ತಾಲ್ಲೂಕಿನಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಗಾಳಿಗೆ ಕೆಲವು ಮನೆ, ಅಂಗಡಿ, ಮದರಸಾದ ಚಾವಣಿಗೆ ಹಾನಿಯಾಗಿದೆ. ಅಲ್ಲದೇ ವಿವಿಧೆಡೆ ಮರಗಳು ಉರುಳಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಕಂಬಗಳು ಮುರಿದಿವೆ.
ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಸುರಿಯಿತು.
44.2 ಡಿಗ್ರಿ ತಾಪಮಾನ ಕಲಬುರ್ಗಿ: ನಗರದಲ್ಲಿ ಗರಿಷ್ಠ ತಾಪಮಾನ ಮಂಗಳವಾರ 44.2 ಡಿಗ್ರಿ ಸೆಲ್ಸಿಯಸ್ ಇತ್ತು. ಅತಿ ಹೆಚ್ಚು ಝಳ ಅನುಭವಿಸುತ್ತಿರುವ ದೇಶದ 10 ನಗರಗಳಲ್ಲಿ ಈಗ ಕಲಬುರ್ಗಿಯೂ ಗುರುತಿಸಿಕೊಂಡಿದೆ.
ಭಾರತ ಹವಾಮಾನ ಇಲಾಖೆಯ ವೆಬ್ಸೈಟ್ನಲ್ಲಿಯ ಮಾಹಿತಿ ಪ್ರಕಾರ 2017ರಲ್ಲಿ ಇದೇ ದಿನ ಗರಿಷ್ಠ ತಾಪಮಾನ 41.4, 2018ರಲ್ಲಿ 42.1 ಹಾಗೂ 2019ರಲ್ಲಿ 41.2 ಡಿಗ್ರಿ ಸೆಲ್ಸಿಯಸ್ ಇತ್ತು.
ಐದು ವರ್ಷಗಳಲ್ಲಿ ಮೊದಲ ಬಾರಿಗೆ ಗರಿಷ್ಠ ತಾಪಮಾನ ದಾಖಲಾಗಿದೆ.