ಬೆಂಗಳೂರು: ರಾಜ್ಯದ 122 ತಾಲ್ಲೂಕು ಆಸ್ಪತ್ರೆಗಳು, 50 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 3 ಎಂಎಚ್ಸಿಗಳಲ್ಲಿ ಇ–ಆಸ್ಪತ್ರೆ ಕಾರ್ಯಕ್ರಮವನ್ನು ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಮೊದಲ ಹಂತದಲ್ಲಿ 47 ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿತ್ತು. ಇದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ವಿಸ್ತರಣೆಗೆ ತೀರ್ಮಾನಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆಸ್ಪತ್ರೆಗಳ ಆಡಳಿತ ಮತ್ತು ರೋಗಿಯ ಮಾಹಿತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕಾಗದ ಮುಕ್ತ ವ್ಯವಸ್ಥೆ ಜಾರಿ ಆಗುತ್ತದೆ. ಇದಕ್ಕಾಗಿ ಭಾರತ ಸರ್ಕಾರ ವಿಶೇಷ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದೆ. ಇ– ಆಸ್ಪತ್ರೆಗಳಲ್ಲಿ ಚೀಟಿ ಬರೆಯುವ ಹಂತದಿಂದ ಎಲ್ಲ ವ್ಯವಸ್ಥೆಯೂ ಡಿಜಿಟಲೀಕರಣ ಆಗುತ್ತದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಅಟಲ್ ಭೂಜಲ ಯೋಜನೆಯನ್ನು ಜಾರಿ ಮಾಡಲು ಒಪ್ಪಿಗೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಂತರ್ಜಲ ವೃದ್ಧಿ ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ₹1201.52 ಕೋಟಿ ಹಂಚಿಕೆ ಮಾಡಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ 25 ಕಡೆಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಮಕ್ಕಳಿಗಾಗಿ ಅಂಬೇಡ್ಕರ್ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ ₹579.75 ಕೋಟಿ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ನಿರ್ಣಯಗಳು
* ದಕ್ಷಿಣ ಕನ್ನಡದ ಎಡಪದವು– ಕುಪ್ಪೆಪದವು–ಅರಳ–ಸೂರ್ನಾಡು ನಡುವೆ ಸೇತುವೆ ನಿರ್ಮಾಣಕ್ಕೆ ₹13.90 ಕೋಟಿ ಅನುದಾನ
* ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿ ಮೀನುಗಾರಿಕೆ ಜಟ್ಟಿ ನಿರ್ಮಾಣಕ್ಕೆ ₹12 ಕೋಟಿ.
* 250 ಸಹಾಯಕರ ನೇಮಕಕ್ಕೆ ಘಟನೋತ್ತರ ಅನುಮತಿ
* ಉನ್ನತ ಶಿಕ್ಷಣ ಸಂಸ್ಥೆಗಳ ವೇತನ– ಪಿಂಚಣಿ ನಿಯಂತ್ರಣ ಮಸೂದೆಗೆ ಒಪ್ಪಿಗೆ
* ಶಿಂಶಾ ನದಿಯಿಂದ ಭೀಮಾ ಜಲಾಶಯಕ್ಕೆ ನೀರು ತುಂಬಿಸುವ ಏತ ನೀರಾವರಿಗೆ ₹20.83 ಕೋಟಿ. ಕಣ್ವ ಜಲಾಶಯದಿಂದ 17 ಕೆರೆಗಳನ್ನು ತುಂಬಿಸಲು ₹24.85 ಕೋಟಿ ಬಿಡುಗಡೆ.
*ಗ್ರಾಮೀಣ ನೈರ್ಮಲ್ಯ ನೀತಿಗೆ ಒಪ್ಪಿಗೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.