ಬೆಂಗಳೂರು:‘ನಾನು ಇಂದು ಕಚೇರಿಯಲ್ಲಿರುತ್ತೇನೆ. ರಾಜೀನಾಮೆ ನೀಡಿರುವ ಶಾಸಕರು ಬಂದು ಭೇಟಿಯಾಗಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರಿಗೆ ಸಭಾಧ್ಯಕ್ಷರು ಮಂಗಳವಾರದವರೆಗೆ ಸಮಯಾವಕಾಶ ನೀಡಿದ್ದರು. ಇಂದು ಕಚೇರಿಗೆ ಬಂದಿರುವ ರಮೇಶ್ ಕುಮಾರ್ ಅವರು, ‘ಸಂವಿಧಾನಕ್ಕೆ ಬದ್ಧವಾಗಿ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಅತೃಪ್ತ ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯಾವುದೇ ದೂರು ಬಂದಿಲ್ಲ. ಸಭಾಧ್ಯಕ್ಷರ ಕಚೇರಿಗೆ ದೂರು ನೀಡಿದ್ದರೆ, ಅದನ್ನು ಪರಿಶೀಲಿಸುತ್ತೇನೆ’ ಎಂದು ವಿವರಿಸಿದರು.
‘ನಾನು ಇದೀಗ ತಾನೆ ವಿಧಾನಸೌಧಕ್ಕೆ ಬಂದಿದ್ದೇನೆ. ಅವರು ಸಲ್ಲಿಸಿರುವ ಪತ್ರಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ರಮೇಶ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
‘ನಾನು ತೀರಾ ಸಾಧಾರಣ ಕುಟುಂಬದಿಂದ ಬಂದವನು. ಆದರೆ ತುಂಬಾ ಮುಖ್ಯವಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ನಾನು ನನ್ನ ಸ್ಥಾನಕ್ಕೆ ಅನ್ಯಾಯ ಮಾಡುವುದಿಲ್ಲ. ಸಂವಿಧಾನ, ಕಾನೂನು, ಜನರ ಆಶೋತ್ತರಗಳನ್ನು ಗಮನಿಸಿ ನನ್ನ ವಿವೇಚನಾ ಅಧಿಕಾರವನ್ನು ಚಲಾಯಿಸುತ್ತಾನೆ’ ಎಂದು ಅವರು ಹೇಳಿದರು.
‘ನನಗೆ ನಾಯಕರು ನನ್ನರಾಜ್ಯದ ಜನ, ಸಂವಿಧಾನ ಮತ್ತು ಪಾಪಪ್ರಜ್ಞೆ ಮಾತ್ರ. ನಾನು ಯಾರ ಮುಲಾಜಿಗೂ ಒಳಪಟ್ಟು ಅಧಿಕಾರ ಚಲಾಯಿಸುವುದಿಲ್ಲ’ ಎಂದರು.