ಕಲಬುರ್ಗಿ: ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ನಗರದ ಎಲ್ಲ ಪೆಟ್ರೋಲ್ ಬಂಕ್ಗಳನ್ನು ಬುಧವಾರದಿಂದ (ಮಾ 18) ಬಂದ್ ಮಾಡಲಾಗುತ್ತಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ರಾತ್ರಿ ಸುಳ್ಳು ವದಂತಿ ಹಬ್ಬಿಸಿದ್ದಾರೆ.
ಇದರಿಂದಾಗಿ ಗಾಬರಿಗೊಂಡ ಬೈಕ್ ಸವಾರರು, ಕಾರಿನವರು ಒಮ್ಮೆಲೇ ಬಂಕ್ಗಳತ್ತ ಧಾವಿಸಿದರು. ಬೆಳ್ಳಂಬೆಳಿಗ್ಗೆಯೇ ಸ್ಟೇಶನ್ ರಸ್ತೆಯ ಎರಡು ಪ್ರಮುಖ ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳು ನಿಂತಿದ್ದವು.
ಇದರಿಂದಾಗಿ ನಗರದ ಕೆಲ ಪೆಟ್ರೋಲ್ ಬಂಕ್ಗಳಲ್ಲಿ ದಟ್ಟಣಿ ಕಂಡು ಬಂತು. ‘ಬಂಕ್ ಬಂದ್ ಮಾಡಲು ಯಾರೂ ಹೇಳಿಲ್ಲ. ಹೀಗಾಗಿ, ಬಂಕ್ ತೆರೆದಿರುತ್ತದೆ’ ಎಂದು ಬಂಕ್ ಸಿಬ್ಬಂದಿ ಹೇಳುತ್ತಲೇ ಇದ್ದರು. ಇದರಿಂದ ನಿರಾಳಗೊಂಡ ಕೆಲವರು ನಿರಮ್ಮಳವಾಗಿ ತಮ್ಮ ಕೆಲಸಗಳಿಗೆ ತೆರಳಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಶರತ್ ಬಿ. ಅವರು ಅತ್ಯವಶ್ಯ ಸೇವೆಗಳಾದ ಸಾರಿಗೆ, ಕಿರಾಣಿ ಅಂಗಡಿಗಳು, ಮೆಡಿಕಲ್ ಶಾಪ್, ಪೆಟ್ರೋಲ್ ಪಂಪ್, ಸಾರಿಗೆ, ಆಸ್ಪತ್ರೆ ಸೇವೆಗಳಂತಹ ಅತ್ಯವಶ್ಯ ಸೇವೆಗಳನ್ನು ಬಂದ್ ಮಾಡುವುದಿಲ್ಲ ಎಂದಿದ್ದಾರೆ.