ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಪ್ರಸ್ತಾಪವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಿ ಬಂದಿದ್ದ ಕಾಂಗ್ರೆಸ್ ಶಾಸಕರಿಗೆ ನಿರಾಸೆ ಕಾದಿತ್ತು. ರಾಜ್ಯಪಾಲರ ಭಾಷಣದಲ್ಲಿ ಸಿಎಎ ಬಗ್ಗೆ ಒಂದೇ ಒಂದು ಸಾಲೂ ಇರಲಿಲ್ಲ. ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ವಿಧಾನಸಭೆಯೊಳಗೆ ಘೋಷಣಾ ಭಿತ್ತಿ ಪತ್ರಗಳನ್ನು ಒಯ್ದಿದ್ದರು. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಹೊರಬಂದ ಐವನ್, ‘ನಾವು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು ಎಂದು ಸಜ್ಜಾಗಿ ಬಂದಿದ್ದೆವು, ಆಗಲಿಲ್ಲ ಎಲ್ಲ ವೇಸ್ಟ್ ಆಯಿತು’ ಎಂದು ಸುದ್ದಿಗಾರರಿಗೆ ಹೇಳಿದರು.