ದಾವಣಗೆರೆ: ‘ಇದು ದರಿದ್ರ ಸರ್ಕಾರ ಎಂದು ನಾನು ಟೀಕಿಸಿದಾಗ ಬಜೆಟ್ನಲ್ಲಿ ಇದಕ್ಕೆ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಬಜೆಟ್ನಲ್ಲಿ ಎಲ್ಲಿದೆ ಉತ್ತರ ಮಿಸ್ಟರ್ ಯಡಿಯೂರಪ್ಪ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
‘ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಜನರು ಹೋರಾಟಕ್ಕೆ ಇಳಿದ ಮೇಲೆ ಕೃಷ್ಣ ಮೇಲ್ದಂಡೆ ಯೋಜನೆಗೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಬಜೆಟ್ನಲ್ಲಿ ಎಲ್ಲಾ ಹಂಚಿ ಆಗಿದೆ. ಮತ್ತೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದರೆ ಅದನ್ನು ಎಲ್ಲಿಂದ ತರುತ್ತಾರೆ? ಬಜೆಟ್ ಮಂಡಿಸಿದ ಒಂದೇ ದಿನದಲ್ಲಿ ಈ ರೀತಿ ಘೋಷಣೆ ಮಾಡುವುದರಿಂದ ಬಜೆಟ್ನ ಪಾವಿತ್ರ್ಯ ಹೋಗುತ್ತದೆ. ಅತ್ಯಂತ ಕೆಟ್ಟ ಪದ್ಧತಿ ಇದು’ ಎಂದು ಭಾನುವಾರ ಟೀಕಿಸಿದರು.
‘ಕಲ್ಯಾಣ ಕರ್ನಾಟಕದ ಪರ ಎಂದು ಹೇಳಿದರೆ ಸಾಲದು. ಕಲ್ಯಾಣ ಕರ್ನಾಟಕಕ್ಕೆ ₹ 2,500 ಕೋಟಿ ಕೇಳಿದ್ದರು. ನೀಡಿದ್ದು ₹ 1,500 ಕೋಟಿ ಮಾತ್ರ. ನಾನು 2017–18ರ ಸಾಲಿನಲ್ಲಿ ಇಷ್ಟೇ ಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಶೇ 5–6ರಷ್ಟು ಹಣದುಬ್ಬರ ಆಗಿರುತ್ತದೆ. ಅಷ್ಟಾದರೂ ಹೆಚ್ಚಿಸಬೇಕಲ್ಲ’ ಎಂದರು.