ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ರಭಸ ಕಡಿಮೆಯಾಗಿದ್ದರೂ ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣವು 1 ಲಕ್ಷ ಕ್ಯುಸೆಕ್ ಮೀರಿದೆ.
ಕೃಷ್ಣಾ ನದಿಯ ಉಗಮಸ್ಥಳವಾದ ಮಹಾಬಳೇಶ್ವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಾಜಾಪುರ ಬ್ಯಾರೇಜ್ ಮೂಲಕ 76,407 ಕ್ಯುಸೆಕ್ ಹಾಗೂ ಅದರ ಉಪನದಿಯಾದ ದೂಧ್ಗಂಗಾ ಮೂಲಕ 23,926 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಮೂಲಕ ರಾಜ್ಯ ಪ್ರವೇಶಿಸಿದೆ.
ಜಿಲ್ಲೆಯ ಬೆಳಗಾವಿ, ಖಾನಾಪುರದಲ್ಲಿ ಶುಕ್ರವಾರ ಮಳೆಯ ರಭಸ ಕಡಿಮೆಯಾಗಿದೆ. ಖಾನಾಪುರ ತಾಲ್ಲೂಕಿನ ಹಿಂಡಲಗಿ, ಚಿಕ್ಕಮುನವಳ್ಳಿ, ಇಟಗಿ, ಜೈನಕೊಪ್ಪ, ಲಕ್ಕಬೈಲ, ಬಲೋಗಾ ಹಾಗೂ ಹಿತ್ತಲಹೊಂಡದಲ್ಲಿ ತಲಾ ಒಂದೊಂದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.