ಬೆಂಗಳೂರು: ಭೂಕಬಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಬೇಕು ಎಂದು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಹಿರಿಯ ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಈ ಸೂಚನೆ ನೀಡಲಾಯಿತು.
ತನಿಖಾ ತಂಡಕ್ಕೆ ಪೊಲೀಸರಿಗಿರುವ ಅಧಿಕಾರವನ್ನೇ ನೀಡಬೇಕು. ಅದರಿಂದ ಭೂಕಬಳಿಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ವಿಚಾರಣೆಗೆ ರಾಜ್ಯದಲ್ಲಿ ಒಂದೇ ವಿಶೇಷ ನ್ಯಾಯಾಲಯ ಇದೆ. ರಾಜ್ಯ ದೂರದ ಜಿಲ್ಲೆಗಳಿಂದ ಜನ ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ. ತಾಲ್ಲೂಕು ಮಟ್ಟದ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುಕೂಲವಾಗುವಂತೆ ಹೊಸ ಅಧಿಸೂಚನೆ ಹೊರಡಿಸುವಂತೆಯೂ ಎಚ್.ಕೆ.ಪಾಟೀಲ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ವಿಜಯಭಾಸ್ಕರ್ ಅವರು ಭರವಸೆ ನೀಡಿದರು.
ಭೂ ಒತ್ತುವರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ 2018 ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 13 ಲಕ್ಷ ಎಕರೆ ಭೂಮಿ ಒತ್ತುವರಿ ಆಗಿದೆ. ಬೆಂಗಳೂರು ಮತ್ತು ಸುತ್ತಮುತ್ತ 4.53 ಲಕ್ಷ ಎಕರೆ ಭೂಕಬಳಿಕೆ ಆಗಿದೆ. ಅದನ್ನು ಬಿಡಿಸಿಕೊಳ್ಳಲು ವಿಶೇಷ ಕಾರ್ಯಾಚರಣೆ ಆಗಬೇಕು ಎಂದು ಹೇಳಿದರು.