ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕೆ.ಆರ್.ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವ ಕುರಿತು ಸ್ಥಳೀಯರು ಆತಂಕಿತರಾಗಿದ್ದಾರೆ. ಮೈದಾನದಲ್ಲಿ ಸಾಮಗ್ರಿ ಖರೀದಿಗೆ ಬರುವವರು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಖರೀದಿಗೆ ಮುಗಿಬಿದ್ದ ಜನ ಖರೀದಿ ವೇಳೆ ಪರಸ್ಪರ ಒಂದು ಮೀಟರ್ಗಳಷ್ಟು ಅಂತರ ಕಾಯ್ದುಕೊಳ್ಳುತ್ತಿಲ್ಲ.
‘ಕೊರೊನಾ ಸೋಂಕು ಇರುವವರು ಇಲ್ಲಿ ಹಣ್ಣು–ತರಕಾರಿ ಖರೀದಿಗೆ ಬಂದಿದ್ದರೆ ತಮಗೆ ಅರಿವಿಲ್ಲದೇ ಇತರರಿಗೂ ಸೋಂಕು ಹರಡುವ ಎಲ್ಲ ಸಾಧ್ಯತೆಗಳೂ ಇವೆ’ ಎಂದು ಸ್ಥಳೀಯರು ಕಳವಳ ತೋಡಿಕೊಂಡರು.
ಕೆ.ಆರ್.ಮಾರುಕಟ್ಟೆಯಲ್ಲಿ ಜನ ಜಂಗುಳಿ ಉಂಟಾಗುವುದನ್ನು ತಪ್ಪಿಸಲು ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಹಾಗೂ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಅವರು ಪರಸ್ಪರ ಸಮಾಲೋಚನೆ ನಡೆಸಿ ಬಸವನ ಗುಡಿ ನ್ಯಾಷನಲ್ ಕಾಲೇಜು ಮೈದಾನವೂ ಸೇರಿದಂತೆ ಮೂರು ಕಡೆ ಮೈದಾನಗಳಿಗೆ ಮಾರುಕಟ್ಟೆಯನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು. ಬಸವನಗುಡಿ ಮೈದಾನದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಖರೀದಿ ಭರಾಟೆ ಜೋರಾಗಿತ್ತು. ಇಲ್ಲಿ ಜನ ತರಕಜಾರಿ ಖರೀದಿ ವೇಳೆ ಅಂತರ ಕಾಯ್ದುಕೊಳ್ಳುವುದಕ್ಕೆ ಯಾವುದೇ ಗುರುತುಗಳನ್ನು ಮಾಡಿರಲಿಲ್ಲ.
‘ಇಲ್ಲಿಗೆ ಕೇವಲ ಸಗಟು ಮಾರುಕಟ್ಟೆಯನ್ನು ಮಾತ್ರ ಸ್ಥಳಾಂತರ ಮಾಡಲಾಗುತ್ತದೆ. ಚಿಲ್ಲರೆ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದು ನಮಗೆ ಹೇಳಿದ್ದರೂ. ನಿನ್ನೆಯೇ ನಾವು ಈ ಬಗ್ಗೆ ಜನಪ್ರತಿನಿಧೀಗಳ ಬಳಿ ಆತಂಕ ತೋಡಿಕೊಂಡಿದ್ದೆವು. ಇಂದು ನೋಡೊದರೆ ಖರೀದಿಗೆ ಬಂದವರು, ವ್ಯಪಾರಿಗಳೂ ಯಾರೂ ಮುಖಗವಸು ತೊಟ್ಟಿಲ್ಲ. ಜನ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ’ ಎಂದು ಸ್ಥಳೀಯ ಶಂಕರ ಪುರನಿವಾಶಿ ಕವೀಶ್ ದೂರಿದರು.
‘ನಮಗೆ ಇಲ್ಲಿಗಿಂತ ಕಲಾಸಿಪಾಳ್ಯ ಮಾರುಕಟ್ಟೆಯೇ ಚೆನ್ನಾಗಿತ್ತು. ಇಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ’ ಎಂದು ವ್ಯಾಪಾರಿ ಏಳುಮಲೈ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.