ಬೆಂಗಳೂರು: ಪ್ರಗತಿಪರ ಚಿಂತಕ- ಮಹೇಂದ್ರ ಕುಮಾರ್ ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಶುಕ್ರವಾರ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ನಿಧನರಾದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಸಲು ಏರ್ಪಾಡು ಮಾಡಲಾಗುತ್ತಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮಹೇಂದ್ರಕುಮಾರ್(47) ಅವರು ರಾಮೇಗೌಡ ಮತ್ತು ಸುನಂದಾ ದಂಪತಿಯ ಕೊನೆಯ ಪುತ್ರ.ಅವರಿಗೆ ಪತ್ನಿ ಸುಮಾ, ಪುತ್ರರಾದ ಶಂತನು, ಆರ್ಯ ಇದ್ದಾರೆ.
ಮಹೇಂದ್ರ ಕುಮಾರ್ ಅವರು ಕೆಲಕಾಲ ಮುಂಬೈನಲ್ಲಿ ಇದ್ದರು.ನಂತರ ಕೊಪ್ಪದಲ್ಲಿ ಸ್ವಂತ ಉದ್ದಿಮೆ, ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಮಹೇಂದ್ರಕುಮಾರ್ ಅವರು ತಾಲ್ಲೂಕು ಬಜರಂಗದಳ ಸಂಚಾಲಕರಾಗಿ, ಜಿಲ್ಲಾ, ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. 2007 ರ ನಂತರದಲ್ಲಿ ಸಂಘ ಪರಿವಾರದ ಚಟುವಟಿಕೆ ತೊರೆದಿದ್ದರು.
ಮಾಜಿ ಶಿಕ್ಷಣ ಸಚಿವ ದಿವಂಗತ ಗೋವಿಂದೇಗೌಡ ಅವರ ಶಿಷ್ಯರಾಗಿದ್ದರು. ಕೆಲ ವರ್ಷಗಳ ಹಿಂದೆ ಜೆಡಿಎಸ್ ಸೇರಿದ್ದರು.
'ನಮ್ಮ ಧ್ವನಿ' ಬಳಗ ಪ್ರಾರಂಭಿಸಿದ್ದ ಅವರು,ಸಿಎಎ, ಎನ್ಆರ್ ಸಿ ವಿರೋಧಿ ಆಂದೋಲನಗಳಲ್ಲಿ ತೊಡಗಿಸಿಕೊಂಡಿದ್ದರು.