ಮಂಡ್ಯ: ಮೇಲುಕೋಟೆಯ ಗಾಂಧಿವಾದಿ ದಿವಂಗತ ಸುರೇಂದ್ರ ಕೌಲಗಿ ಅವರು ಪುತ್ರ ಸುಘೋಷ್ ಕೌಲಗಿ (52) ಗುರುವಾರ ಹೃದಯಾಘಾತದಿಂದ ನಿಧನರಾದರು.
ತಂದೆಯ ಮಾದರಿಯಲ್ಲೇ ಸುಘೋಷ್ ಕೂಡ ‘ಹೊಸ ಜೀವನ ದಾರಿ’ ಸಂಸ್ಥೆಯ ಮೂಲಕ ಅಂಗವಿಕಲ ಮಕ್ಕಳ ಶುಶ್ರೂಷೆಯಲ್ಲಿ ತೊಡಗಿದ್ದರು.
ತಂದೆ ಆರಂಭಿಸಿದ್ದ ಜನಪದ ವಿದ್ಯಾಲಯದಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದರು. ರಂಗ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದ ಅವರು ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದರು. ಖಾದಿ ವಸ್ತ್ರಗಳ ಪ್ರಚಾರ ಕಾರ್ಯದಲ್ಲೂ ತೊಡಗಿದ್ದರು.
ಅವರಿಗೆ ಸಹೋದರ, ಪರಿಸರ ತಜ್ಞ ಸಂತೋಷ್ ಕೌಲಗಿ, ಪತ್ನಿ, ಪುತ್ರ ಇದ್ದಾರೆ. ‘ಹೊಸ ಜೀವನ ದಾರಿ’ ಸಂಸ್ಥೆಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಕುಟುಂಬದ ಮೂಲಗಳು ತಿಳಿಸಿವೆ.