ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರು ಇದ್ದಲ್ಲಿಯೇ ಅವರಿಗೆ ಊಟದ ವ್ಯವಸ್ಥೆ ನೀಡಲು ಕ್ರಮ: ಗೋವಿಂದ ಕಾರಜೋಳ

Last Updated 29 ಮಾರ್ಚ್ 2020, 11:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೊರೊನಾ ಸೋಂಕು ವ್ಯಾ‍ಪಕವಾಗಿ ಹರಡುತ್ತಿರುವುದರಿಂದ ಹೊರರಾಜ್ಯಗಳಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿಕೊಂಡವರು ಸದ್ಯಕ್ಕೆ ತಮ್ಮ ಊರಿಗೆ ಮರಳುವುದು ಬೇಡ. ಅದಕ್ಕೆ ಅಧಿಕಾರಿಗಳು ಅವಕಾಶವನ್ನೂ ನೀಡಬಾರದು’ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೊರೊನಾ ಸೋಂಕು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾನುವಾರ ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಕಾರಜೋಳ, ‘ಅವರು ಇರುವಲ್ಲಿಯೇ ಊಟದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಲಿದ್ದಾರೆ. ತಮ್ಮ ಊರಿಗೆ ಮರಳುವುದರಿಂದ ಸೋಂಕು ಹರಡುವ ಭೀತಿ ಗ್ರಾಮಸ್ಥರಲ್ಲಿ ಉಂಟಾಗಬಹುದು. ಹೀಗಾಗಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಗಡಿಯಲ್ಲಿರುವ ಜನರನ್ನು ಬಿಡಬಾರದು’ ಎಂದರು.

ರೈತರಿಗೆ ಅನುಮತಿ: ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ತೊಂದರೆ ಇಲ್ಲ. ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆದು ಎಪಿಎಂಸಿಗೆ ತಂದು ಮಾರಾಟ ಮಾಡಬಹುದು. ಔಷಧಿ ಸಗಟು ಪೂರೈಕೆದಾರರೂ ಅಗತ್ಯ ದಾಸ್ತಾನನ್ನು ಪಡೆಯಬಹುದು. ಔಷಧಿ ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವುದರಿಂದ ಯಾರೂ ಇದಕ್ಕೆ ಅಡ್ಡಿ ಮಾಡಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಜೈಲಿಗಟ್ಟಿ. ಇದು ಇತರರಿಗೆ ಪಾಠವಾಗಬೇಕು ಎಂದು ಖಡಕ್‌ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 40 ವೆಂಟಿಲೇಟರ್‌ಗಳಿದ್ದು, ಹೆಚ್ಚುವರಿ 100 ವೆಂಟಿಲೇಟರ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಕಾರಜೋಳ ಅವರು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT