ದಾವಣಗೆರೆ: ವೈರಸ್ ಹರಡುತ್ತಿರುವುದು ಒಂದು ಭಯೋತ್ಪಾದನೆ ಇದ್ದಂತೆ.. ಅವರೆಲ್ಲ ದೇಶದ್ರೊಹಿಗಳು. ತಬ್ಲೀಗ್ಗೆ ಹೋದವರು ನೇರವಾಗಿ ಆಸ್ಪತ್ರೆಗೆ ಬಂದಿದ್ದರೆ ಈ ರೀತಿ ಆಗುತ್ತಿರಲಿಲ್ಲ..
ತಬ್ಲೀಗ್ಗೆಹೋಗಿ ಬಂದವರಲ್ಲಿ ಯಾರು ಚಿಕಿತ್ಸೆಗೆ ಸ್ಪಂದಿಸುವುದಿಲ್ಲವೋ ಅವರಿಗೆ ಗುಂಡಿಟ್ಟು ಕೊಂದರೂ ತಪ್ಪಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಎಲ್ಲಾ ಅಲ್ಪಸಂಖ್ಯಾತರ ಬಗ್ಗೆ ಹೇಳುತ್ತಿಲ್ಲ, ತಬ್ಲಿಗ್ಗೆ ಹೋಗಿ ಬಂದು ಸ್ಪಂದನೆ ನೀಡದವರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಚೀನಾದಲ್ಲಿ ಒಬ್ಬನಿಂದ ಇಡೀ ವಿಶ್ವಕ್ಕೆ ಕೊರೋನಾ ಬಂದಿದೆ. ಹಾಗೇ ಯಾರು ಹೋಗಿದ್ದಾರೋ ಅವರು ಚಿಕಿತ್ಸೆ ಪಡೆಯಲು ಮುಂದೆ ಬರಲಿ ಎಂದು ಸಲಹೆ ನೀಡಿದರು.
ಅಂತರವಿಲ್ಲ: ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಗಾಳಿಗೆ ತೂರಿದ ರೇಣುಕಾಚಾರ್ಯ ಜನರನ್ನು ಗುಂಪು ಸೇರಿಸಿಕೊಂಡು ಆಹಾರ ಕಿಟ್ ವಿತರಣೆ ಮಾಡಿದರು.
ದಾವಣಗೆರೆ ನಗರದ ಕಾಯಿಪೇಟೆಯಲ್ಲಿಪಕ್ಷದ ಕಾರ್ಯಕರ್ತರೊಂದಿಗೆ ಪಡಿತರ ವಿತರಣೆ ಮಾಡಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಐದಕ್ಕಿಂತ ಹೆಚ್ಚು ಜನ ಸೇರಬಾರದು ಎಂಬ ನಿಯಮವೂ ಪಾಲನೆಯಾಗಲಿಲ್ಲ.
ಸ್ಪಷ್ಟನೆ: ನಾನು ಪ್ರತಿನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಇಂದು ಕೂಡ ನಿರ್ಗತಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಲು ಬಂದಿದ್ದೆ. ಆದರೆ ಜನರು ಸೇರಿದ್ದಾರೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ನಾನು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.
ನನ್ನ ಮಗ ಕೂಡ ಬೇರೆ ದೇಶದಲ್ಲಿ ಇದಾನೆ. ಅವನಿಗೆ ನಾನು ಅಲ್ಲೇ ಇರು ಆರೋಗ್ಯ ಕಾಪಾಡಿಕೊ ಎಂದು ಹೇಳಿ ಸಮಾಧಾನ ಮಾಡಿದ್ದೇನೆ. ನೋವನ್ನು ನುಂಗಿಕೊಂಡು ನಾನು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.