ಬೆಂಗಳೂರು: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನೂ ಗೆಲ್ಲದೇ ತೀವ್ರ ಮುಖಭಂಗ ಅನುಭವಿಸಿದ ಕುರಿತು ಟ್ವೀಟ್ ಮಾಡಿರುವ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್. ಎ. ಹ್ಯಾರೀಸ್, ಸೋಲುಗಳು ಪಾಠವಾಗಬೇಕೇ ಹೊರತು ಅಭ್ಯಾಸವಾಗಬಾರದು ಎಂದು ಪಕ್ಷದ ವಿರುದ್ಧ ಗುಡುಗಿದ್ದಾರೆ.
ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ ಆದರೆ @INCIndia ಪಕ್ಷ ಹಲವಾರು ಸೋಲುಗಳ ನಡುವೆಯೂ ಎಚ್ಚೆತ್ತುಕೊಳ್ಳದೇ ಇರುವುದು ನಿಜಕ್ಕೂ ಆತಂಕಕಾರಿ .ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ ಪಕ್ಷವನ್ನು ಕಟ್ಟುವುದಕ್ಕಾಗಿಯೊ? ಅಥವಾ ತಮ್ಮ ಸ್ವ ಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿ ಕೊಡುವುದಕ್ಕಾಗಿಯೊ? 1/3
‘ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ. ಕಾಂಗ್ರೆಸ್ ಪಕ್ಷ ಹಲವು ಸೋಲುಗಳ ನಡುವೆಯೂ ಎಚ್ಚೆತ್ತುಕೊಳ್ಳದೇ ಇರುವುದು ನಿಜಕ್ಕೂ ಆತಂಕಕಾರಿ. ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ? ಪಕ್ಷವನ್ನು ಕಟ್ಟುವುದಕ್ಕಾಗಿಯೊ? ಅಥವಾ ತಮ್ಮ ಸ್ವ ಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿ ಕೊಡುವುದಕ್ಕಾಗಿಯೊ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ದೆಹಲಿಯಂತಹ ಫಲಿತಾಂಶಗಳು ಹಲವು ಬಾರಿ ಬಂದಿವೆ. ಆದರೂ ಈ ಬಗ್ಗೆ ಪಕ್ಷ ಯೋಚನೆ ಮಾಡದೇ ಇರುವುದು. ತಪ್ಪುಗಳನ್ನು ತಿದ್ದಿಕೊಳ್ಳದೆ ಇರುವುದು ಯೋಚಿಸಬೇಕಾದ ವಿಚಾರ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಇದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಚಿಂತಿಸುತ್ತಿಲ್ಲ. ಸೋಲುಗಳು ಪಾಠವಾಗಬೇಕು ಅಭ್ಯಾಸವಾಗಬಾರದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಪಕ್ಷದ ಭವಿಷ್ಯ ಅಪಾಯದಲ್ಲಿದೆ.ದೆಹಲಿಯ ಫಲಿತಾಂಶ ಪಕ್ಷದ ಹಿರಿಯ ನಾಯಕರಿಗೆ ಸಂದೇಶವಾಗಬೇಕು ಎಂಬುದು ನನ್ನ ಆಗ್ರಹ’ ಎಂದೂ ಅವರು ಟ್ವೀಟ್ನಲ್ಲಿ ಹ್ಯಾರಿಸ್ ಬರೆದುಕೊಂಡಿದ್ದಾರೆ.