ಮಡಿಕೇರಿ: ಕೊಡಗಿನಲ್ಲೂ ನಕ್ಸಲ್ ಚಟುವಟಿಕೆ ನಡೆಸಿದ್ದ ಆರೋಪ ಎದುರಿಸುತ್ತಿರುವ ಬಂಧಿತ ಶಂಕಿತ ನಕ್ಸಲ್ ಮುಖಂಡ ರೂಪೇಶ್ನನ್ನು ಪೊಲೀಸ್ ಭದ್ರತೆಯಲ್ಲಿ ಶನಿವಾರ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವೀರಪ್ಪ ವಿ.ಮಲ್ಲಾಪುರ ಅವರು ರಜೆಯಲ್ಲಿದ್ದ ಕಾರಣ, 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಡಿ. ಪವನೇಶ್ ಎದುರು ವಿಚಾರಣೆಗೆ ಹಾಜರು ಪಡಿಸಲಾಯಿತು. ಬಳಿಕ ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಲಾಯಿತು.
ರೂಪೇಶ್ ನ್ಯಾಯಾಲಯದ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆಯೇ ‘ಮಾವೊವಾದಿ ಜಿಂದಾಬಾದ್’ ಎಂಬ ಘೋಷಣೆ ಕೂಗಿದ.
ಕೇರಳದ ಕಾರಾಗೃಹದಲ್ಲಿ ರೂಪೇಶ್ನನ್ನು ಇರಿಸಲಾಗಿದ್ದು ವಿಚಾರಣೆ ಮುಗಿದ ನಂತರ ಪೊಲೀಸ್ ಭದ್ರತೆಯಲ್ಲಿ ಮತ್ತೆ ಅಲ್ಲಿಗೇ ಕರೆದೊಯ್ಯಲಾಯಿತು.
2010ರಲ್ಲಿ ಕೊಡಗಿನ ಮುಂಡ್ರೋಡು ಅರಣ್ಯ ಪ್ರದೇಶದಲ್ಲಿರೂಪೇಶ್ ನೇತೃತ್ವದ ಶಂಕಿತನಕ್ಸಲ್ ತಂಡವು ಪ್ರತ್ಯಕ್ಷವಾಗಿತ್ತು. ಅಲ್ಲದೇ ಕಾಲೂರು, ಪರಕಟಗೇರಿ ಹಾಗೂ ಚೇರಂಬಾಣೆಯಲ್ಲಿ ತಂಡವು ಪ್ರತ್ಯಕ್ಷವಾಗಿ ನಕ್ಸಲ್ ಪರವಾದ ಕರಪತ್ರ ಹಂಚಿಕೆ ಮಾಡಿದ್ದ ಆರೋಪವಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ಮಡಿಕೇರಿ ಕೋರ್ಟ್ನಲ್ಲಿ ನಡೆಯುತ್ತಿದೆ.