ಮಡಿಕೇರಿ: ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ನಡೆಸಿದ್ದ ಆರೋಪದ ಮೇರೆಗೆ ಬಂಧಿತನಾಗಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ನನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮಂಗಳವಾರ ಹಾಜರು ಪಡಿಸಲಾಯಿತು.
ಮಡಿಕೇರಿ ಕೋರ್ಟ್ ಆವರಣಕ್ಕೆ ಹಾಜರಾಗುತ್ತಿದ್ದಂತೆಯೇ ರೂಪೇಶ್, ‘ಪಶ್ಚಿಮಘಟ್ಟದಲ್ಲಿ ಕಾಡು ಉಳಿಸಿ...’ ಎಂದು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.
ಮಂಗಳವಾರ ಬೆಳಿಗ್ಗೆ ಕೇರಳ ಜೈಲಿನಲ್ಲಿದ್ದ ರೂಪೇಶ್ನನ್ನು ಪೊಲೀಸ್ ಭದ್ರತೆಯೊಂದಿಗೆ ಕೋರ್ಟ್ ಆವರಣಕ್ಕೆ ಕರೆ ತರಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ್ 9ನೇ ಬಾರಿಗೆ ವಿಚಾರಣೆಗೆ ಹಾಜರಾದ. ನ್ಯಾಯಾಧೀಶರು ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದರು. ನಂತರ, ಬಿಗಿ ಪೊಲೀಸ್ ಭದ್ರತೆಯ ಕೇರಳಕ್ಕೆ ವಾಪಾಸ್ ಕರೆದೊಯ್ಯಲಾಯಿತು.
ರೂಪೇಶ್ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಆರೋಪಗಳಿವೆ. 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷನಾಗಿದ್ದ ಎನ್ನಲಾಗಿದೆ.